Greater Bengaluru News9: ಕರ್ನಾಟಕ ಕಾಂಗ್ರೆಸ್ನಲ್ಲಿ ನಾಯಕತ್ವ ಘರ್ಷಣೆ ಮತ್ತಷ್ಟು ಗಂಭೀರವಾಗಿದ್ದು, ಕುರ್ಚಿ ಕದನ ಈಗ ನೇರವಾಗಿ ದೆಹಲಿ ದಾರಿ ಹಿಡಿದಿದೆ.
ಡಿ.ಕೆ.ಶಿವಕುಮಾರ್ ಪರವಾಗಿ 10ಕ್ಕೂ ಹೆಚ್ಚು ಶಾಸಕರು ದೆಹಲಿಗೆ ತೆರಳಿ ಶಕ್ತಿಪ್ರದರ್ಶನ ನಡೆಸಿದ್ದಾರೆ. ಈ ನಡುವೆ, ಬೆಂಗಳೂರಿನಲ್ಲಿ ದಲಿತ ನಾಯಕರ ಗುಂಪು ಪ್ರತ್ಯೇಕ ಡಿನ್ನರ್ ಮೀಟಿಂಗ್ನಲ್ಲಿ ಮಹತ್ವದ ರಾಜಕೀಯ ಚರ್ಚೆ ನಡೆಸಿದೆ.
ಚಲುವರಾಯಸ್ವಾಮಿ ನೇತೃತ್ವದ ಶಾಸಕರ ತಂಡ ಈಗಾಗಲೇ ದೆಹಲಿ ತಲುಪಿದ್ದು, ಮತ್ತೊಂದು ತಂಡ ಕೂಡ ಸಂಜೆ ವಿಮಾನ ಹತ್ತುವ ಸಾಧ್ಯತೆ ಹೆಚ್ಚಿದೆ. ಮಾಗಡಿ ಬಾಲಕೃಷ್ಣ, ಇಕ್ಬಾಲ್ ಹುಸೇನ್, ಶಿವಗಂಗಾ ಬಸವರಾಜ್ ಸೇರಿ ಹೋಗಬಹುದು ಎನ್ನಲಾಗಿದ್ದರೂ, ಬಾಲಕೃಷ್ಣ ಈ ಬಗ್ಗೆ ನೇರ ಉತ್ತರ ತಪ್ಪಿಸಿ ನಿಗೂಢತೆ ಕಾಯ್ದುಕೊಂಡಿದ್ದಾರೆ.
ಇನ್ನೊಂದೆಡೆ, ಸತೀಶ್ ಜಾರಕಿಹೊಳಿ ಅವರ ನಿವಾಸದಲ್ಲಿ ಸಿಎಂ ಆಪ್ತ ಹಾಗೂ ಪ್ರಮುಖ ದಲಿತ ಸಚಿವರು ಡಿನ್ನರ್ ಮೀಟಿಂಗ್ ನಡೆಸಿದ್ದಾರೆ. ಕೆ.ಎನ್. ರಾಜಣ್ಣ, ವೆಂಕಟೇಶ್, ಜಿ. ಪರಮೇಶ್ವರ್, ಹೆಚ್.ಸಿ. ಮಹದೇವಪ್ಪರು ಮಾತುಕತೆಯಲ್ಲಿ ಪಾಲ್ಗೊಂಡಿದ್ದರು.
ಡಿನ್ನರ್ ಮೀಟಿಂಗ್ನಲ್ಲಿ ಚರ್ಚೆಯಾದ 3 ಅಜೆಂಡಗಳು:
- ಡೆಹಲಿಯ ಪರೇಡ್ ಅಗತ್ಯವಿತ್ತೇ?
ಹೈಕಮಾಂಡ್ ಈಗಾಗಲೇ ಮಾತನಾಡುವುದಾಗಿ ಭರವಸೆ ನೀಡಿದ್ದರೂ ಡಿಕೆಶಿ ಬೆಂಬಲಿಗರು ಶಿಸ್ತು ಮೀರಿ ನಡೆದಿರುವ ವಿಚಾರ ಹೈಕಮಾಂಡ್ ಗಮನಕ್ಕೆ ತರಬೇಕು ಎಂದು ತೀರ್ಮಾನ. - ನಾವು ಈಗ ದೆಹಲಿ ಹೋದರೆ ತಪ್ಪು ಸಂದೇಶ:
ಡಿಕೆಶಿ ಬಣ ಭೇಟಿಗೆ ಹೋದ ಹಿನ್ನೆಲೆ, ವಿರೋಧಿ ಬಣ ಈಗಲೇ ಹೋಗಬಾರದು ಎಂಬ ಅಭಿಪ್ರಾಯ. ಅಗತ್ಯ ಬಂದರೆ ಮಾತ್ರ ಸಂಖ್ಯಾಬಲ ಪ್ರದರ್ಶನದೊಂದಿಗೆ ದೆಹಲಿಗೆ ತೆರಳಲು ಸಿದ್ದತೆ. - ಪವರ್ ಶೇರಿಂಗ್ ಇದ್ದರೆ—ದಲಿತ ಸಿಎಂ ಆಗಲಿ:
ಪಕ್ಷದೊಳಗಿನ ಪವರ್ ಶೇರಿಂಗ್ ಮಾತು ನಿಜವಾದರೆ, ದಲಿತ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟು ಹಿಡಿಯುವ ವಿಷಯದಲ್ಲಿ ಚರ್ಚೆ. ‘ನಾವು ಕೇಳಿ ಓಡಾಡುವುದಿಲ್ಲ, ಆದರೆ ಅಂತಹ ಪ್ರಸ್ತಾಪ ಬಂದರೆ ದಲಿತ ಸಿಎಂ ಮಾಡಬೇಕು’ ಎಂಬ ನಿಲುವು.
ಒಟ್ಟಾರೆ, ಕಾಂಗ್ರೆಸ್ನಲ್ಲಿ ನಾಯಕತ್ವದ ಸೇಡು-ಸವಾಲು ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಮುಂದಿನ 48 ಗಂಟೆಗಳು ಪಕ್ಷದ ರಾಜಕೀಯಕ್ಕೆ ನಿರ್ಣಾಯಕವಾಗಲಿವೆ.


