Greater Bengaluru News9 : ಬಿಹಾರ ಎಲೆಕ್ಷನ್ ಮುಗಿದ ಬೆನ್ನಲ್ಲೇ ಕರ್ನಾಟಕ ಗದ್ದುಗೆ ಗುದ್ದಾಟಕ್ಕೆ ರೆಕ್ಕೆಪುಕ್ಕ ಮತ್ತಷ್ಟು ಬಲಿತಿವೆ. ಬಿಹಾರ ಚುನಾವಣೆಯಲ್ಲಿ ಬ್ಯುಸಿಯಾಗಿದ್ದ ಹೈಕಮಾಂಡ್ ಈಗ ರಾಜ್ಯದತ್ತ ಚಿತ್ತ ಹರಿಸೋಕೆ ಮುಂದಾಗಿದೆ. ನವೆಂಬರ್ 15ರಂದು ಸಿಎಂ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದು, ಸಂಪುಟ ಪುನಾರಚನೆ ಚರ್ಚೆ ನೆಪದಲ್ಲಿ ನಾಯಕತ್ವ ಬದಲಾವಣೆ ಚರ್ಚೆಗೂ ಮುನ್ನುಡಿ ಬರೆಯುತ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ.
ಒಂದು ವೇಳೆ ರಾಹುಲ್ ಗಾಂಧಿ ಭೇಟಿಗೆ ಸಮಯ ಸಿಕ್ಕರೆ ರಾಜಕೀಯ ಗೊಂದಲಗಳಿಗೆ ತೆರೆ ಬೀಳೋ ಸಾಧ್ಯತೆ ಇದೆ. ಡಿಸಿಎಂ ಡಿಕೆಶಿ ಕೂಡ ನವೆಂಬರ್ 15ರಂದೇ ದೆಹಲಿಗೆ ತೆರಳುತ್ತಿದ್ದಾರೆ. ಇತ್ತ ಸಚಿವ ಸ್ಥಾನ ಭದ್ರಪಡಿಸಿಕೊಳ್ಳೋಕೆ ಸಚಿವರು ಕೂಡ ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾರೆ.
ಸಿಎಂ ದೆಹಲಿ ಭೇಟಿ ಹೊಸ್ತಿಲಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಕ್ಕೆ ಬಂದಿದ್ದು, ಸಚಿವರ ಮ್ಯಾರಥಾನ್ ಭೇಟಿ ಶುರುವಾಗಿದೆ. ಇಂದು ಸಚಿವ ಜಮೀರ್ ಅಹ್ಮದ್, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಖರ್ಗೆಯವರನ್ನು ಭೇಟಿಯಾದರು. ಮಂಗಳವಾರ ದೆಹಲಿಯಲ್ಲಿ ಸತೀಶ್ ಜಾರಕಿಹೊಳಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಭೇಟಿಯಾಗಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಸಿದ್ದರಾಮಯ್ಯ ಟೀಂ ಮತ್ತೆ ಪೂರ್ಣಾವಧಿ ಸಿಎಂ ಎಂದು ಕ್ಲೈಂ ಮಾಡುತ್ತಿದ್ದಾರೆ. ಖರ್ಗೆ ಭೇಟಿ ಬಳಿಕ ಸಚಿವ ಜಮೀರ್ ಅಹ್ಮದ್ ಮಾತನಾಡಿ, 2028ರವರೆಗೆ ಸಿದ್ದರಾಮಯ್ಯನವರೇ ಸಿಎಂ. 2028ಕ್ಕೆ ಡಿಕೆಶಿ ಸಿಎಂ ಆಗಲಿ ಎಂದಿದ್ದಾರೆ.
ಇತ್ತ ಕುರುಬ ಸಂಘದ ನೂತನ ಕಟ್ಟಡ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಚಿವ ಬೈರತಿ ಸುರೇಶ್, ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿ, ಸಿಎಲ್ಪಿ ಬೆಂಬಲ ತಗೊಂಡು, ಖರ್ಗೆ, ಸೋನಿಯಾ ಗಾಂಧಿ ಪ್ರೀತಿಪಾತ್ರರಾಗಿ 100 ರೂ. ಖರ್ಚು ಮಾಡದೇ ಸಿದ್ದರಾಮಯ್ಯ 2ನೇ ಬಾರಿ ಸಿಎಂ ಆಗಿದ್ದಾರೆ. ದುಡ್ಡಿದ್ದವರು ಸಿಎಂ ಆಗಲು ಪ್ರಯತ್ನಿಸಿದ್ರೂ ಆಗಲಿಲ್ಲ ಎಂದು ಹೇಳಿದ್ದಾರೆ.


