BBMP
Loading ...

DK Shivakumar

Greater Bengaluru News9 : ಕರ್ನಾಟಕ ಹೈಕೋರ್ಟ್ ಕಟ್ಟಡವನ್ನು ವಿಧಾನಸೌಧದ ಎದುರಿನ ಪ್ರಸ್ತುತ ಸ್ಥಳದಿಂದ ಸ್ಥಳಾಂತರಿಸಬಹುದು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭಾನುವಾರ ಸುಳಿವು ನೀಡಿದ್ದಾರೆ.

“ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ಕಾರ್ಯಕ್ರಮಕ್ಕೆ ಹೋದ ಸಂದರ್ಭದಲ್ಲಿ ಹೈಕೋರ್ಟ್ ಸ್ಥಳಾಂತರಕ್ಕೆ 15- 20 ಎಕರೆ ಜಾಗ ನೀಡಿ ಎಂದು ವಕೀಲರು, ಮುಖ್ಯ ನ್ಯಾಯಮೂರ್ತಿಗಳು ಮನವಿ ಮಾಡಿದ್ದರು. ಸರ್ಕಾರದ ಮುಂದೆಯೂ ಇದರ ಬಗ್ಗೆ ಚರ್ಚೆ ನಡೆಸಲಾಗುವುದು. ನ್ಯಾಯಾಲಯದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹತ್ತಿರದಲ್ಲಿ ಎಲ್ಲಿ ಸ್ಥಳಾವಕಾಶ ದೊರೆಯಬಹುದು ಎಂದು ಪರಿಶೀಲನೆ ಮಾಡಲಾಗುವುದು. ಹಳೆಯ ಐತಿಹಾಸಿಕ ಕಟ್ಟಡವಾದ ಕಾರಣಕ್ಕೆ ಅದನ್ನು ಏನೂ ಮಾಡಲು ಸಾಧ್ಯವಿಲ್ಲ. ಆದರೆ ಸ್ಥಳವಾಕಾಶ ಚಿಕ್ಕದಿದೆ” ಎಂದರು.

ಹೈಕೋರ್ಟ್ ಅನ್ನು ನಗರದ ಹೊರಗೆ ಸ್ಥಾಪಿಸಲು ಸಾಧ್ಯವಿಲ್ಲ. ಅದಕ್ಕೆ ಸೂಕ್ತ ಸ್ಥಳಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಕಕ್ಷಿದಾರರು, ಲಾಯರ್ ಗಳಿಗೆ ಅನುಕೂಲವಾಗುವಂತಹ ಸ್ಥಳ ನೋಡಬೇಕಿದೆ. ಒಂದಷ್ಟು ಜನ ವಕೀಲರು ಭೇಟಿ ಮಾಡಿ ರೇಸ್ ಕೋರ್ಸ್ ಜಾಗ ಬಳಸಿಕೊಳ್ಳುವ ಬಗ್ಗೆ ತಿಳಿಸಿದರು. ಒಂದಷ್ಟು ಕಾನೂನಾತ್ಮಕ ತೊಡಕುಗಳು ಇರುವ ಕಾರಣಕ್ಕೆ ಆನಂತರ ಅದರ ಬಗ್ಗೆ ಆಲೋಚನೆ ಮಾಡೋಣ ಎಂದು ತಿಳಿಸಿದ್ದೇನೆ” ಎಂದರು.

“ಈ ಮೊದಲು ಎಲ್ಲಾ ಹೋರಾಟಗಳು, ಪ್ರತಿಭಟನೆಗಳು ಕಬ್ಬನ್ ಪಾರ್ಕ್ ಅಲ್ಲಿಯೇ ನಡೆಯುತ್ತಿತ್ತು. ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಇದನ್ನು ಸ್ವಾತಂತ್ರ್ಯ ಉದ್ಯಾನಕ್ಕೆ ಸ್ಥಳಾಂತರ ಮಾಡಲಾಯಿತು. ನಗರದ ಶ್ವಾಸಕೋಶದಂತೆ ಇರುವ ಈ ಉದ್ಯಾನ ಉಳಿಸಿಕೊಳ್ಳಲು ಏನು ಮಾಡಬೇಕೊ ಅದನ್ನು ನಾನು ಮಾಡುತ್ತೇನೆ. ಎಷ್ಟು ಗಂಟೆಗೆ ಯಾರು ಒಳ ಬಂದರು ಹೊರ ಹೋದರು ಎಂಬುದನ್ನು ದಾಖಲು ಮಾಡಲು ಕಬ್ಬನ್ ಪಾರ್ಕ್ ನಲ್ಲಿ ಹೈಟೆಕ್ ಕ್ಯಾಮೆರಾ ಗಳನ್ನು ಅಳವಡಿಕೆ ಮಾಡಬೇಕು. ಆಯುಕ್ತರ ಕಚೇರಿಯಲ್ಲಿಯೂ ಸಹ ಇದರ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇ‌‌ನೆ” ಎಂದರು.

“ಬೆಂಗಳೂರು ನಗರದ ಉತ್ತಮ ಆಡಳಿತಕ್ಕಾಗಿ 5 ಪಾಲಿಕೆಗಳನ್ನು ರಚಿಸಲಾಗಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರದ ಎಲ್ಲಾ ಆಸ್ತಿ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಈ ಮೂಲಕ ಎಲ್ಲರ ಆಸ್ತಿಗಳನ್ನು ಭದ್ರಗೊಳಿಸಲಾಗುತ್ತಿದೆ. ಬಿ ಖಾತೆಯಿಂದ ಎ ಖಾತೆ ಬದಲಾವಣೆ ವಿಚಾರವಾಗಿ ಸಾವಿರಾರು ಜನರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೂ ಒಂದಷ್ಟು ಜನ ಟೀಕೆ ಮಾಡುತ್ತಿದ್ದಾರೆ. ಇದರಿಂದ ಅನೇಕರಿಗೆ ಉಪಯೋಗವಾಗಲಿದೆ. ಇದೊಂದು ಕ್ರಾಂತಿಕಾರಕ ಆಲೋಚನೆ” ಎಂದರು.

Leave a Reply

Your email address will not be published. Required fields are marked *