Greater Bengaluru News9: ರಾಜ್ಯ ಸರ್ಕಾರದ ಮಹತ್ವಪೂರ್ಣ ಯೋಜನೆಯಾದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಹಾಗೂ ಸಮೀಕ್ಷೆಗೆ ಶಿಕ್ಷಕರನ್ನು ಬಳಸಿಕೊಳ್ಳುವ ಉದ್ದೇಶದಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಇದೀಗ ದಸರಾ ರಜೆಯನ್ನು ಅ.18 ರವರೆಗೆ ವಿಸ್ತರಿಸಿ ಎಂದು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ.
ಇಂದು ಹಮ್ಮಿಕೊಂಡಿದ್ದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ ಸಿಎಂ, ಅಕ್ಟೋಬರ್ 19ಕ್ಕೂ ಮುನ್ನವೇ ಸರ್ವೇ ಮುಗಿಸಿಕೊಡುತ್ತೇವೆ ಎಂದು ಶಿಕ್ಷಕರು ಭರವಸೆ ನೀಡಿದ್ದಾರೆ. ಸರ್ವೇಗೆ ಒಟ್ಟು 12 ದಿನಗಳು ಸಿಗುತ್ತವೆ. ಈ ಅವಧಿಯೊಳಗೆ ನಾವು ಮುಗಿಸಬೇಕಿದೆ. ಪೂರ್ಣ ಕೆಲಸ ಆಗಬೇಕು ಎಂದಾದರೆ ರಜೆ ಕೊಡಬೇಕು ಎಂದು ಶಿಕ್ಷಕರ ಸಂಘ ನಮಗೆ ಮನವಿ ಮಾಡಿತ್ತು. ಹೀಗಾಗಿಯೇ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಮಾತ್ರ ನಾಳೆಯಿಂದ ಅ.18 ರವರೆಗೆ ರಜೆಯನ್ನು ನೀಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಈ ಸರ್ವೆಗೆ ಹಿಂದೇಟು ಹಾಕುವವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುತ್ತೇವೆ. ಸಮೀಕ್ಷೆಯಲ್ಲಿ 1.20 ಲಕ್ಷ ಶಿಕ್ಷಕರು ಭಾಗಿಯಾಗಿದ್ದಾರೆ. ಸದ್ಯದ ಮಟ್ಟಿಗೆ ಪಿಯುಸಿ ಉಪನ್ಯಾಸಕರು ಸರ್ವೇಯಲ್ಲಿ ಭಾಗಿಯಾಗುವಂತಿಲ್ಲ. ಈಗ ನೀಡಿರುವ ಸಮಯದೊಳಗೆ ಸಮೀಕ್ಷೆಯನ್ನು ಮುಗಿಸಿಕೊಡಲು ಸ್ಪಷ್ಟಪಡಿಸಿದ್ದೇವೆ ಎಂದು ಸಿಎಂ ಹೇಳಿದರು.


