Greater Bengaluru News9 : ಇನ್ನೇನು ನವರಾತ್ರಿ ದೀಪಾವಳಿ ಹಬ್ಬ ಬರುತ್ತಿವೆ, ಈ ಸಂದರ್ಭದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸುವವರು ಸಾಕಷ್ಟು ಜನ. ಆದ್ರೆ ಪಟಾಕಿ ಸಿಡಿಸುವಾಗ ಆಗುವ ಅನಾಹುತಗಳ ಬಗ್ಗೆ ಪ್ರತಿವರ್ಷ ಸರ್ಕಾರ ಎಚ್ಚರಿಕೆ ಕೊಡುತ್ತದೆ. ಆದರೆ ಅದನ್ನು ಕಿವಿ ಮೇಲೆ ಹಾಕಿಕೊಳ್ಳದೆ ಜನ ಪಟಾಕಿ ಸಿಡಿಸಲು ಹೋಗಿ ಅಪಾಯ ತಂದುಕೊಳ್ಳುತ್ತಾರೆ. ಅದರಲ್ಲೂ ಕೆಲವು ಪ್ರದೇಶಗಳಲ್ಲಿ ಪದೇ ಪದೇ ಪಟಾಕಿ ದುರಂತ ನಡೆಯುತ್ತಲೇ ಇರುತ್ತವೆ.
ಇದೀಗ ಪಟಾಕಿ ದುರಂತಕ್ಕೆ ಬ್ರೇಕ್ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಪಟಾಕಿ ಮಾರಾಟಗಾರರ ಸಭೆಯಲ್ಲಿ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆಯನ್ನ ನೀಡಿದ್ದಾರೆ.
ಕಳೆದ ಬಾರಿ ಅತ್ತಿಬೆಲೆಯಲ್ಲಿ ಹಾಗೂ ಮಾರ್ಕೆಟ್ ಭಾಗದಲ್ಲಿ ಪಟಾಕಿ ದುರಂತಗಳು ಆಗದ ಹಾಗೇ ಕಟ್ಟೆಚರ ವಹಿಸಲು ನಿರ್ದೇಶನ ನೀಡಿದ್ದಾರೆ. ಯಾವುದೇ ಪಟಾಕಿ ಮಾರಾಟಗಾರರಿಗೆ ಮುಂಗಡವಾಗಿ ಪಟಾಕಿ ಸಂಗ್ರಹಕ್ಕೆ ಅವಕಾಶ ಇಲ್ಲ. ಬೇಡಿಕೆ ಹೆಚ್ಚಿದೆ ಎಂದು ಪಟಾಕಿ ಓವರ್ ಲೋಡ್ ಸಂಗ್ರಹ ಮಾಡಿಕೊಂಡಿದ್ದು ಕಂಡು ಬಂದರೆ ಕಾನೂನು ಕ್ರಮದ ಎಚ್ಚರಿಕೆಯನ್ನ ನೀಡಿದ್ದಾರೆ.
ಅತಿಯಾಗಿ ಪಟಾಕಿಗಳನ್ನ ಗೋಡೌನ್ಗಳಲ್ಲಿ ಸಂಗ್ರಹ ಮಾಡಿಕೊಂಡರೆ ಅನಾಹುತಗಳಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಾಗಾಗಿ ಅನಾಹುತಗಳಿಗೆ ಆಸ್ಪದ ಕೊಡಬಾರದು ಅನ್ನೋ ಕಾರಣಕ್ಕೆ ಮುಂಚಿತವಾಗಿ ಪಟಾಕಿ ಸಂಗ್ರಹ ಮಾಡಿಕೊಳ್ಳುವುದಕ್ಕೆ ಅವಕಾಶ ಇರುವುದಿಲ್ಲ ಎಂದು ಪಟಾಕಿ ಮಾರಾಟಗಾರರಿಗೆ ಸೂಚನೆ ನೀಡಿದ್ದಾರೆ. ಮಾರಾಟಗಾರರು ದೀಪಾವಳಿ ಹಬ್ಬಕ್ಕೆ 5 ದಿನ ಮುಂಚಿತವಾಗಿ ತಂದು ಐದು ದಿನಗಳ ಒಳಗಾಗಿ ಸ್ಟಾಕ್ ಖಾಲಿ ಮಾಡಿಕೊಳ್ಳಬೇಕು.
ಸೆ.18 ರಿಂದ 22ರ ತನಕ ಒಟ್ಟು ಐದು ದಿನ ಪಟಾಕಿ ಮಾರಾಟ ಮಾಡುವುದಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಅನಧಿಕೃತವಾಗಿ ಗೋಡೌನ್ಗಳಲ್ಲಿ ಪಟಾಕಿ ಸಂಗ್ರಹಣೆ ಬಗ್ಗೆ ಬೀಟ್ ಪೊಲೀಸರು ಪರಿಶೀಲನೆ ನಡೆಸುತ್ತಾರೆ. ಒಂದು ವೇಳೆ ಪಟಾಕಿ ಸಂಗ್ರಹ ಮಾಡಿಕೊಂಡಿರುವುದು ಕಂಡು ಬಂದರೆ ಅಂತಹ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುತ್ತದೆ ಸೂಚನೆ ನೀಡಿದ್ದಾರೆ.


