BBMP
Loading ...

BESCOM

Greater Bengaluru News9 : ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬದಲಿಸಿಕೊಡಲು ರೈತರಿಂದ ಲಂಚದ ಹಣ ಪಡೆದು ಸಿಕ್ಕಿ ಬಿದ್ದಿದ್ದ ಬೆಸ್ಕಾಂ ಎಂಜಿನಿಯರ್‌ಗೆ ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿ 7ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ. ಸುಳ್ಳು ಸಾಕ್ಷಿ ಹೇಳಿದ ರೈತನಿಗೂ ಕೋರ್ಟ್ ಚುರುಕು ಮುಟ್ಟಿಸಿದೆ.

ಕೊರಟಗೆರೆ ತಾಲ್ಲೂಕು ತೀತಾ ಬೆಸ್ಕಾಂ ಶಾಖೆಯ ಜೂನಿಯರ್ ಎಂಜಿನಿಯರ್ ಮೊಹಮ್ಮದ್ ರಫಿ ದೋಷಿ ಎಂದು ಬುಧವಾರ ತೀರ್ಮಾನಿಸಿದ್ದ ನ್ಯಾಯಾಲಯ, ಗುರುವಾರ ಶಿಕ್ಷೆ ಪ್ರಕಟಿಸಿದೆ.

ತಮ್ಮ ಜಮೀನಿಗೆ ಅಳವಡಿಸಿದ್ದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸುಟ್ಟು ಹೋಗಿದ್ದು, ಬದಲಿಸಿಕೊಡುವಂತೆ ಕೊರಟಗೆರೆ ತಾಲ್ಲೂಕು ತೀತಾ ಬಳಿಯ ಕೆಂಗನಪಾಳ್ಯ ಗ್ರಾಮದ ರೈತ ಟಿ.ಎಂ.ರಾಘವೇಂದ್ರ ಅವರು ತೀತಾ ಬೆಸ್ಕಾಂ ಶಾಖೆಯ ಜೂನಿಯರ್ ಎಂಜಿನಿಯರ್ ಮೊಹಮ್ಮದ್ ರಫಿಗೆ ಮನವಿ ಮಾಡಿದ್ದರು. ಟ್ರಾನ್ಸ್‌ಫಾರ್ಮರ್ ಬದಲಿಸಿಕೊಡಲು ₹10 ಸಾವಿರ ಲಂಚಕ್ಕೆ ಒತ್ತಾಯಿಸಿದ್ದನು.

ಲಂಚ ನೀಡದೆ ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 2021 ಮೇ 24ರಂದು ಕೊರಟಗೆರೆ ಪಟ್ಟಣದಲ್ಲಿರುವ ಬೆಸ್ಕಾಂ ಎಂಜಿನಿಯರ್ ಕಚೇರಿಯಲ್ಲಿ ಲಂಚದ ಹಣ ತೆಗೆದುಕೊಳ್ಳುವಾಗ ಎಸಿಬಿ ಪೊಲೀಸರು ದಾಳಿ ನಡೆಸಿ ರಫಿಯನ್ನು ಬಂಧಿಸಿದ್ದರು.

ನಂತರ ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಾದ ಎಸ್.ವಿಜಯಲಕ್ಷ್ಮಿ, ಕೆ.ರಾಮರೆಡ್ಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು. ವಿಚಾರಣೆ ನಡೆಸಿದ 7ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಯಾಸ್ಮಿನ ಪರವಿನ ಲಾಡಖಾನ ಶಿಕ್ಷೆ ವಿಧಿಸಿದ್ದಾರೆ. ಲೋಕಾಯುಕ್ತ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಎನ್.ಬಸವರಾಜು ವಾದಿಸಿದ್ದರು.

ಸುಳ್ಳು ಹೇಳಿದ್ದಕ್ಕೆ ನೋಟಿಸ್
ನ್ಯಾಯಾಲಯದ ವಿಚಾರಣೆ ಸಮಯದಲ್ಲಿ ದೂರುದಾರ ರೈತ ಟಿ.ಎಂ.ರಾಘವೇಂದ್ರ ಸುಳ್ಳು ಸಾಕ್ಷ್ಯ ನುಡಿದಿದ್ದು ಅವರಿಗೂ ನ್ಯಾಯಾಲಯ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದೆ. ಸೆ. 22ರಂದು ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಲಾಗಿದೆ. ಲಂಚಕ್ಕೆ ಒತ್ತಾಯಿಸಿದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ರಾಘವೇಂದ್ರ ಅವರಿಂದ ಎಂಜಿನಿಯರ್ ಮೊಹಮ್ಮದ್ ರಫಿ ಹಣ ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು. ನಂತರ ನಡೆದ ವಿಚಾರಣೆ ಸಮಯದಲ್ಲಿ ಈ ವಿಚಾರವನ್ನು ಮುಚ್ಚಿಟ್ಟು ಸುಳ್ಳು ಹೇಳಿರುವುದು ನ್ಯಾಯಾಧೀಶರ ಗಮನಕ್ಕೆ ಬಂದಿದೆ. ರಫಿ ಜತೆಗೆ ‘ಹೊಂದಾಣಿಕೆ’ ಮಾಡಿಕೊಂಡು ವ್ಯತಿರಿಕ್ತವಾಗಿ ಸಾಕ್ಷಿ ಹೇಳಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *