Greater Bengaluru News9 : ಕನ್ನಡ ಚಿತ್ರರಂಗದ ಕಲಾವಿದರ ಮೇಲೆ ಈ ಹಿಂದೆ ಹಲವು ಬಾರಿ ದಾಳಿಗಳು ನಡೆದಿವೆ. ಈ ಬಗ್ಗೆ ನೇರವಾಗಿ ಮಾತನಾಡಿದ್ದರು ನಟ ವಿನೋದ್ ರಾಜ್. ಒಂದಲ್ಲ, ಎರಡಲ್ಲ ಬರೋಬ್ಬರಿ ಏಳು ಬಾರಿ ತಮ್ಮ ಮೇಲೆ ಅಟ್ಯಾಕ್ ಆಗಿತ್ತು ಎಂದು ವಿನೋದ್ ರಾಜ್ ಸಂದರ್ಶನವೊಂದರಲ್ಲಿ ಶಾಕಿಂಗ್ ವಿಚಾರಗಳನ್ನು ಹೇಳಿಕೊಂಡಿದ್ದರು.
ಅಲ್ಲದೆ ನಟ ಸಾಹಸಸಿಂಹ ವಿಷ್ಣುವರ್ಧನ್ ಅವರ ಮೇಲೆ ಕೂಡ ಕೆಲ ವ್ಯಕ್ತಿಗಳು ಮಾರಕಾಸ್ತ್ರದಿಂದ ಹಲ್ಲೆ ಯತ್ನ ನಡೆಸಿದ್ದರು. ಇದು ನನ್ನ ಕಣ್ಣು ಮುಂದೆಯೇ ನಡೆಯಿತು ಎಂದಿದ್ದರು.
‘ಅಂದು ತನ್ನ ಕಣ್ಣಾರೆ ನಡೆದ ಘಟನೆ ವಿವರಿಸಿದ್ದ ವಿನೋದ್ ರಾಜ್, ವಿಷ್ಣುವರ್ಧನ್ ಅವರ ಮೇಲೆ ಯಾಕೆ ಆವತ್ತು ಅಟ್ಯಾಕ್ ಮಾಡಿದ್ರೋ ನಿಜಕ್ಕೂ ಗೊತ್ತಿಲ್ಲ. ಅದನ್ನ ಅಭಿಮಾನಿಗಳೇ ಅರ್ಥ ಮಾಡಿಕೊಳ್ಳಬೇಕು. ನಾನು ಇವರೇ ಮಾಡಿದ್ದು, ಅವರೇ ಮಾಡಿದ್ದು ಅಂತ ಹೇಗೆ ಹೇಳೋದು?’ ಎಂದು ಹೇಳಿದ್ದರು.
‘ವಿಷ್ಣುವರ್ಧನ್ ಅವರ ಮೇಲೆ ಅಟ್ಯಾಕ್ ಆಗಿದ್ದನ್ನ ನಾನು ಕಣ್ಣಾರೆ ನೋಡಿದ್ದೆ. ನಾನು, ಅಮ್ಮ ಹಾಗೂ ವಿಷ್ಣುವರ್ಧನ್ ಅವರು ಒಂದು ಕಾರ್ಯಕ್ರಮಕ್ಕೆ ಹೋಗಿ ವಾಪಸ್ ಬರುವಾಗ ಯಾರೋ ರೇಜರ್ ತೆಗೆದು ಅಟ್ಯಾಕ್ ಮಾಡಿದ್ರು. ಆಗ ವಿಷ್ಣು ಅವರು ಸಡನ್ನಾಗಿ ತಪ್ಪಿಸಿಕೊಂಡು ತಮ್ಮ ಕೈಯಿಂದ ಸರಿಯಾಗಿ ಬಿಟ್ರು. ಇದರ ಉದ್ದೇಶವೇನು?’ ಎಂದು ವಿನೋದ್ ರಾಜ್ ಬೇಸರ ಹೊರಹಾಕಿದ್ದರು.
‘ನಮ್ಮ ಮೇಲೆ ಶೂಟೌಟ್ ಆಯ್ತು’
‘ಶಾಂತಲಾ ಸಿಲ್ಕ್ ಹೌಸ್ನಲ್ಲಿ ನಮ್ಮ ಮೇಲೂ ಶೂಟೌಟ್ ಆಗಿತ್ತು. ಆದರೆ ಬೇರೆ ಏನೋ ಹೇಳಿ ಅದನ್ನ ಮುಚ್ಚಾಕಿದ್ರು. ಅದರ ಬಗ್ಗೆ ನನಗೆ ಏನೂ ಯೋಚನೆ ಇಲ್ಲ. ನಮ್ಮ ಮೇಲೆ ಏಳು ಬಾರಿ ಅಟ್ಯಾಕ್ ಆಯ್ತು. ನಮ್ಮ ಮೈಲನಹಳ್ಳಿ ತೋಟದ ಬಳಿಯೇ ಒಬ್ಬ ರೈಫಲ್ ಹಿಡಿದು ಬಂದಿದ್ದ. ಆದ್ರೆ ಇದೆಲ್ಲ ಯಾಕೆ ಅನ್ನೋದೆ ನಮಗೆ ಗೊತ್ತಿಲ್ಲ. ಎಲ್ಲ ವಿಚಿತ್ರವಾಗಿದೆ’ ಎಂದು ಅಚ್ಚರಿ ವ್ಯಕ್ತಪಡಿಸಿದ್ದರು ವಿನೋದ್.
‘ಒಮ್ಮೆ ನಮ್ಮ ಆಫೀಸ್ ಕೆಳಗೆ ಸ್ಕಾರ್ಪಿಯೋ ಕಾರು ನಿಲ್ಲಿಸಿದ್ರು. ಅಮ್ಮ ಕೆಳಗೆ ಇಳಿಯೋಕೆ ಆಗದೆ ಅಡ್ಡವಾಗಿ ನಿಲ್ಲಿಸಿದ್ರು. ಆ ಮೇಲೆ ಬಂದು ದುರಂಹಕಾರವಾಗಿ ಮಾತನಾಡಿದ. ಆ ವ್ಯಾನ್ ನಂಬರ್ ಚೆಕ್ ಮಾಡಿದ್ರೆ ಬೇರೆ ಮಾರುತಿ ಗಾಡಿಯ ನಂಬರ್ ಹಾಕಿಕೊಂಡಿದ್ದು ಗೊತ್ತಾಯ್ತು. ಗಾಡಿ ಸೀಜ್ ಮಾಡಿಸಿದ್ವಿ, ಆಮೇಲೆ ತಪ್ಪಾಯ್ತು ಅಂತ ಕೇಳಿಕೊಂಡ. ವಯಸ್ಸಾದ ನನ್ನ ತಾಯಿ ಕೆಳಗೆ ಬರೋಕಾಗದೆ ಅಲ್ಲೇ ನಿಂತಿದ್ರು, ಎಷ್ಟು ಒದ್ದಾಡಿರಬೇಕು, ನೀನು ಒಬ್ಬ ತಾಯಿಗೇ ತಾನೆ ಹುಟ್ಟಿದ್ದು? ಕನಿಕರ ಬರಲಿಲ್ವಾ? ಅಂತ ಕೇಳಿದೆ. ಆಗ ಆತ ಕಣ್ಣೀರು ಹಾಕುತ್ತಾ ಕಾಲಿಗೆ ಬೀಳಲು ಬಂದ’ ಎಂದು ಮತ್ತೊಂದು ಘಟನೆ ವಿವರಿಸಿದ್ದರು.
‘ಫ್ಯಾನ್ ವಾರ್ನಿಂದ ಮೂರನೆ ವ್ಯಕ್ತಿಗೆ ಲಾಭ!’
‘ಅಭಿಮಾನಿಗಳ ನಡುವೆ ಯಾವುದೇ ಕಾರಣಕ್ಕೂ ಗಲಾಟೆ ಆಗಬಾರದು. ಇದು ಕರ್ನಾಟಕದಲ್ಲಿ ಮಾತ್ರ ಅಲ್ಲ, ಬೇರೆ ರಾಜ್ಯಗಳಲ್ಲೂ ನಡೆದಿದೆ. ಏನೇ ಆದರೂ ಸಮರಸದಿಂದ ಒಂದು ತೀರ್ಮಾನಕ್ಕೆ ಬಂದು ಸುಮ್ಮನಾಗಿದ್ದಾರೆ. ಆದರೆ ನಮ್ಮಲ್ಲಿ ಫ್ಯಾನ್ ವಾರ್ ಅನ್ನೋದು ಬೂದಿ ಮುಚ್ಚಿದ ಕೆಂಡವಾಗಿದೆ. ಇಲ್ಲಿ ನಾವು ಸಿನಿಮಾ ಮಾಡೋಕೆ ಬಂದಿದ್ದೀವಾ? ಜಗಳ ಮಾಡೋಕೆ ಬಂದಿದ್ದೀವಾ? ನಾವು ನಾವೇ ಜಗಳ ಆಡಿಕೊಂಡಿದ್ರೆ ಮೂರನೇ ವ್ಯಕ್ತಿ ಲಾಭ ಮಾಡಿಕೊಳ್ತಾರೆ, ಇದು ಚಿತ್ರರಂಗ ಮಾತ್ರ ಅಲ್ಲ, ಎಲ್ಲ ಕಡೆಯೂ ಇದೆ’ ಎಂದಿದ್ದರು.


