ಬೆಂಗಳೂರು: ಮನೆಯಿಂದ ಹೊರಗಡೆ ಬಂದಾಗ ಶೂ, ಚಪ್ಪಲಿ ಧರಿಸುವ ಮುನ್ನ ಎಚ್ಚರವಿರಲಿ. ಬೆಂಗಳೂರಿನಲ್ಲಿ ಉರಗಗಳ ಹಾವಳಿ ಹೆಚ್ಚಾಗುತ್ತಿದ್ದು, ಮೂರೇ ದಿನದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಹೌದು, ಬೆಂಗಳೂರಿನಲ್ಲಿ ಹಾವುಗಳು ಶೂ, ಚಪ್ಪಲಿಗಳಲ್ಲಿ ಸೇರಿಕೊಳ್ಳುತ್ತಿರುವ ಘಟನೆ ಹೆಚ್ಚುತ್ತಿದೆ. ಗಮನಿಸದೇ ಶೂ ಧರಿಸಿದ ಇಬ್ಬರು ಇತ್ತೀಚಿಗೆ ಸಾವನ್ನಪ್ಪಿದ್ದು, ಮತ್ತಷ್ಟು ಆತಂಕ ಹೆಚ್ಚಿಸಿದೆ.
ಮಂಗಳವಾರ (ಸೆ.2) ಬೆಳಿಗ್ಗೆ ಮಾರತ್ಹಳ್ಳಿ ಬಳಿ ಮನೆಯಿಂದ ಹೊರ ಬಂದು ಶೂ ಹಾಕಲು ಹೋದ ಓರ್ವ ವ್ಯಕ್ತಿ ಒಂದು ಕ್ಷಣ ಗಾಬರಿಯಾದರು. ಆ ಶೂ ಒಳಗೆ ನಾಗರಹಾವಿತ್ತು. ಶೂ ಒಳಭಾಗದಲ್ಲೇ ಹೆಡೆ ಎತ್ತಿ ಆತಂಕ ಮೂಡಿಸಿತ್ತು. ಮಳೆ ಕಾರಣದಿಂದಾಗಿ ಹಾವುಗಳು ಬೆಚ್ಚಗಿನ ಜಾಗವನ್ನು ಅರಸಿಬಂದಿರುತ್ತವೆ. ಶೂ, ಚಪ್ಪಲಿಗಳು ತುಂಬಾ ಬೆಚ್ಚಗಿರುವುದರಿಂದ ಇವುಗಳಲ್ಲಿ ಸೇರಿರುತ್ತವೆ.
3 ದಿನಗಳ ಹಿಂದೆ ಬನ್ನೇರುಘಟ್ಟದ ರಂಗನಾಥ ಬಡಾವಣೆಯಲ್ಲಿ ಹಾವು ಕಚ್ಚಿ ಟೆಕ್ಕಿ ಪ್ರಕಾಶ್ ಮೃತ ಪಟ್ಟಿದ್ದರು. ಇನ್ನೂ ರಾಜ್ಯದಲ್ಲಿ ಜನವರಿ 1ರಿಂದ ಆಗಸ್ಟ್ 17ರ ತನಕ 13,494 ಹಾವು ಕಡಿತ ಪ್ರಕರಣ ದಾಖಲಾಗಿವೆ.


