ಬೆಂಗಳೂರು : ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಪ್ರಭಾವಿ ನಾಯಕರಾದ ಕೆ.ಎನ್. ರಾಜಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿಎಂ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ರಾಜಣ್ಣಗೆ ಅವರ ಮಾತುಗಳೇ ಮುಳುವಾಯ್ತು ಎನ್ನಲಾಗಿದೆ.
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಹೇಳಿಕೆಗೆ ತದ್ವಿರುದ್ಧವಾಗಿ ಹೇಳಿಕೆ ನೀಡಿದ್ದ ರಾಜಣ್ಣ ನಮ್ಮಿಂದಲೂ ತಪ್ಪಾಗಿದೆ ಎಂದಿದ್ದರು. ಒಂದೆಡೆ ಕಾಂಗ್ರೆಸ್ ಮತಗಳ್ಳತನ ಖಂಡಿಸಿ ದೇಶಾದ್ಯಂತ ಹೋರಾಟ ನಡೆಸುತ್ತಿರುವಾಗಲೇ, ಮತ್ತೊಂದು ಕಡೆ, ನಮ್ಮಲ್ಲೂ ತಪ್ಪಾಗಿದೆ ಅನ್ನೋ ಮೂಲಕ ಪಕ್ಷಕ್ಕೆ ಮುಜುಗರ ತರಿಸಿದ್ದರು. ಲೋಕಸಭೆ ಚುನಾವಣೆ ನಡೆದಾಗ ನಮ್ಮದೇ ಸರ್ಕಾರ ಇತ್ತು. ಅಧಿಕಾರಿಗಳು ಮಾಡಿದ ಲೋಪಕ್ಕೆ ಮೊದಲೇ ಕ್ರಮ ಕೈಗೊಳ್ಳಬೇಕಿತ್ತು ಎಂದಿದ್ದರು. ಇದು ರಾಹುಲ್ ಗಾಂಧಿ, ಖರ್ಗೆ ಹೋರಾಟವನ್ನೇ ಪರೋಕ್ಷವಾಗಿ ಟೀಕಿಸಿದಂತಿತ್ತು.
ಅಲ್ಲದೇ ಇತ್ತೀಚಿಗೆ ಸೆಪ್ಟೆಂಬರ್ ಕ್ರಾಂತಿ ಹೇಳಿಕೆ ನೀಡಿದ್ದ ರಾಜಣ್ಣ, ಕಾಂಗ್ರೆಸ್ ಪಾಳಯದಲ್ಲಿ ಭಾರೀ ಕೋಲಾಹಲವನ್ನೇ ಸೃಷ್ಟಿಸಿದ್ದರು. ಇದಲ್ಲದೇ ರಣದೀಪ್ ಸುರ್ಜೇವಾಲ ಅವರು ನಡೆಸಿದ ಶಾಸಕರ ಒನ್ ಟು ಒನ್ ಮೀಟಿಂಗ್ ಕೂಡ ಟೀಕೆ ಮಾಡಿದ್ದರು.
ಇನ್ನೂ ಮತ್ತೊಂದು ವಿಚಾರವೆಂದರೇ ಉಪಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ವಿರುದ್ಧ ಬಹಿರಂಗ ಹೇಳಿಕೆಗಳನ್ನು ಕೊಡ್ತಾ ಬಂದಿದ್ರು. ಒಟ್ನಲ್ಲಿ ಮಾತು ಮನೆ ಕಡೆಸಿತು.. ತೂತು ಒಲೆ ಕೆಡಿಸಿತು ಅನ್ನೋ ಗಾದೆ ಮಾತಿಗೆ ತಾಜಾ ಸಾಕ್ಷಿಯಾಗಿದ್ದಾರೆ ಕೆ.ಎನ್. ರಾಜಣ್ಣ.


