ಬೆಂಗಳೂರು: 2025ರ ಐಪಿಎಲ್ ಫೈನಲ್ ಪಂದ್ಯವು ಇಂದು ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವೆ ಫೈನಲ್ ಮ್ಯಾಚ್ ನಡೆಯಲಿದೆ. 2022ರ ನಂತರ ಈ ಬಾರಿ ಐಪಿಎಲ್ನಲ್ಲಿ ಹೊಸ ಚಾಂಪಿಯನ್ ಹೊರಹೊಮ್ಮಲಿದ್ದಾರೆ. 18 ವರ್ಷಗಳಿಂದ ಕಾಯ್ತಿದ್ದ ಅಭಿಮಾನಿಗಳು ಈ ಬಾರಿ ಆರ್ಸಿಬಿ ತಂಡ ಕಪ್ ಗೆಲ್ಲೋದು ಪಕ್ಕಾ ಅಂತಿದ್ದಾರೆ. ಅಷ್ಟೇ ಅಲ್ಲದೇ ಆರ್ಸಿಬಿ ಪಂದ್ಯ ಗೆಲ್ಲಲ್ಲಿ ಎಂದು ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.
ಬೆಂಗಳೂರಿನ ಹಲವು ದೇವಾಲಯಗಳಲ್ಲಿ ಪೂಜೆ
ಆರ್ಸಿಬಿ ತಂಡದ ಗೆಲುವಿಗೆ ದೇವರ ಕೃಪೆ ಇರಲಿ ಎಂದು ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಈ ಬಾರಿ ಕಪ್ ನಮ್ಮದಾಗಲಿ ಎಂಬ ಆಸೆಯೊಂದಿಗೆ ಫ್ಯಾನ್ಸ್ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇಂದು ನಗರದ ಹಲವೆಡೆಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ.
ಶಕ್ತಿ ದೇವತೆಗೆ ಪೂಜೆ ಸಲ್ಲಿಕೆ
ಬೆಂಗಳೂರಿನ ಶಕ್ತಿ ದೇವತೆ ಬನಶಂಕರಿ, ರಾಜಾರಾಜೇಶ್ವರಿನಗರದ ನಿಮಿಷಾಂಭ ದೇವಾಲಯ ಸೇರಿದಂತೆ ಇನ್ನೂ ಹಲವೆಡೆಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆಯುತ್ತಿವೆ. ಆರ್ಸಿಬಿ ಗೆದ್ದು ಬರಲಿ ಎಂಬ ಉದ್ದೇಶದಿಂದ ಅಭಿಮಾನಿಗಳು ಶಕ್ತಿ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಬದ್ರಿನಾಥ್ ದೇವಾಲದಲ್ಲಿ ಕನ್ನಡಿಗರ ಪೂಜೆ
ಇಂದು ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಫೈನಲ್ ಮ್ಯಾಚ್ ಹಿನ್ನೆಲೆಯಲ್ಲಿ ಕನ್ನಡಿಗರು ಉತ್ತರಾಖಂಡದ ಪವಿತ್ರ ಬದ್ರಿನಾಥ್ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ರು. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಆರ್ಸಿಬಿ ಅಭಿಮಾನಿಗಳು, ತಮ್ಮ ಟೀ ಶರ್ಟ್ಗಳಿಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು. ಇಂದು ನಡೆಯಲಿರುವ ಫೈನಲ್ ಮ್ಯಾಚ್ನಲ್ಲಿ ಆರ್ಸಿಬಿ ಗೆಲ್ಲಲಿ ಎಂಬ ಉದ್ದೇಶದಿಂದ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮಂಡ್ಯದಲ್ಲೂ ವಿಶೇಷ ಪೂಜೆ
ಇಂದಿನ IPL ಫೈನಲ್ ಪಂದ್ಯದಲ್ಲಿ RCB ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಹಣಾಹಣಿ ಭಾರೀ ಕುತೂಹಲ ಮೂಡಿಸಿದೆ. RCB ಗೆಲುವಿಗಾಗಿ ಅಭಿಮಾನಿಗಳು ಮಂಡ್ಯದಲ್ಲೂ ಶಕ್ತಿ ದೇವತೆ ಮೊರೆ ಹೋಗಿದ್ದಾರೆ. ಮಂಡ್ಯದ RCB ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು.
ಉರುಳಿ ಸೇವೆ, ಹರಕೆ ಕಟ್ಟಿದ ಅಭಿಮಾನಿಗಳು
ಮಂಡ್ಯ ನಗರದ ಶಕ್ತಿ ದೇವತೆ ಕಾಳಿಕಾಂಭ ದೇಗುಲದಲ್ಲಿ ತಡೆ ಒಡೆದು ವಿಶೇಷ ಪೂಜೆ ನೆರವೇರಿಸಲಾಯಿತು. ದೇಗುಲದ ಬಳಿ ಉರುಳಿ ಸೇವೆ ಮಾಡಿದ ಅಭಿಮಾನಿಗಳಿ RCB ಗೆಲುವಿಗೆ ಹರಿಕೆ ಹೊತ್ತೊದ್ದಾರೆ. 18 ವರ್ಷಗಳ ವನವಾಸದ ಬಳಿಕ RCB IPL ಕಪ್ ಗೆಲ್ಲುವ ವಿಶ್ವಾಸ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಈ ಬಾರಿ RCB ಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸುತ್ತಿರುವ RCB ಅಭಿಮಾನಿಗಳು ಬೆಂಗಳೂರು ರಾಯೆಲ್ ಚಾಲೆಂಜರ್ಸ್ ತಂಡಕ್ಕೆ ಆಲ್ದಿ ಬೆಸ್ಟ್ ಹೇಳ್ತಿದ್ದಾರೆ. ಮಂಡ್ಯದ 7 ಹಿಲ್ಸ್ ಕ್ರಿಕೆಟ್ ಅಕಾಡೆಮಿ ಮಕ್ಕಳು RCB ಗೆ ಜೈಕಾರ ಕೂಗಿದ್ರು.
ಹುಬ್ಬಳ್ಳಿಯಲ್ಲೂ ವಿಶೇಷ ಪೂಜೆ
ಐಪಿಎಲ್ ಫೈನಲ್ ಪಂದ್ಯದ ಹಿನ್ನೆಲೆ ಹುಬ್ಬಳ್ಳಿಯಲ್ಲೂ ಆರ್.ಸಿ.ಬಿ ಪರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿತು. ಹುಬ್ಬಳ್ಳಿಯ ಕೋರ್ಟ್ ವೃತ್ತದಲ್ಲಿರುವ ಸಾಯಿಬಾಬಾ ಮಂದಿರದಲ್ಲಿ ಈ ಪೂಜೆ ನಡೆಯಿತು. ಗಣೇಶ್ ಪೇಟೆಯ ಯುವಕರು ಈ ಪೂಜೆಯನ್ನು ಆಯೋಜಿಸಿದ್ದರು. ಯುವಕರು ಆರ್.ಸಿ.ಬಿ ಜೆರ್ಸಿಗಳನ್ನು ಧರಿಸಿ, ಆರ್.ಸಿ.ಬಿ ತಂಡದ ಜಯಕ್ಕಾಗಿ ಪ್ರಾರ್ಥಿಸಿದರು. ವಿಶೇಷವಾಗಿ, ವಿರಾಟ್ ಕೊಹ್ಲಿ ಕಪ್ ಹಿಡಿದುಕೊಂಡಿರುವ ಫ್ಲೆಕ್ಸ್ ಗೆ ಪೂಜೆ ಸಲ್ಲಿಸಲಾಯಿತು. ಈ ಬಾರಿ ಆರ್ ಸಿಬಿ ಜಯಶಾಲಿಯಾಗಲೆಂದು ಪ್ರಾರ್ಥನೆ ಮಾಡಲಾಯಿತು. ಆರ್.ಸಿ.ಬಿ ಪರ ಘೋಷಣೆ ಕೂಗಿದ ಯುವಕರು, ಆರ್ಸಿಬಿಗೆ ಶುಭಕೋರಿದ್ರು. ಇಂದು ಪಂಜಾಬ್ ಕಿಂಗ್ಸ್ ವಿರುದ್ಧ ಆರ್ಸಿಬಿ ಸೆಣಸಾಡಲಿದೆ.
ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ‘ಜನಸೇವಕ’ ಬುಕ್ ಮಾಡಿ ಮನೆಯಲ್ಲೇ ಇ-ಖಾತಾ ಪಡೆಯಿರಿ! ಹೇಗೆ?


