ಮತ್ತೆ ಅದೇ ಭಯ.. ಆತಂಕ.. ಸುಳಿವು ನೀಡದೇ ಸದ್ದು ಮಾಡ್ತಿರೋ ಕೊರೊನಾ ಅಬ್ಬರಿಸಲು ಶುರು ಮಾಡಿದೆ. ಹೋಗಿದ್ದ ಪಿಶಾಚಿ ಮತ್ತೆ ಬಂದು ವಕ್ಕರಿಸಿದೆ. ರಾಜಧಾನಿ ಬೆಂಗಳೂರಲ್ಲಿ ಮಹಾಮಾರಿ ಸದ್ದು ಮಾಡ್ತಿದೆ. ದಿನದಿಂದ ದಿನಕ್ಕೆ ಕೇಸ್ಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಬಿಟ್ಟರೂ ಬಿಡದೀ ಮಾಯೆ ಎನ್ನುವಂತೆ ಕೊರೊನಾ ಹೊಸ ಹೊಸ ಅವತಾರ ತಾಳಿ ಬರುತ್ತಲೇ ಇದೆ. ಇದೀಗ ರಾಜ್ಯದಲ್ಲಿ ಕೊರೊನಾ ಎಂಬ ಕ್ರಿಮಿಯ ಕಾಟ ಮತ್ತೆ ಶುರುವಾಗಿದೆ. ರಾಜ್ಯದಲ್ಲಿ ಮತ್ತೆ ಚೀನಾ ತಳಿಯ ಗುಮ್ಮ ಕಂಗೆಡಿಸಿದೆ. ಮುಂಗಾರು ಪೂರ್ವ ಮಳೆ ಜೊತೆಜೊತೆಯಲ್ಲೇ ದಾಂಗುಡಿ ಇಟ್ಟು ದಂಗುಬಡಿಸಿದೆ. ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಸೋಂಕು ಹೆಚ್ಚಾಗಿದೆ. ರಾಜ್ಯರಾಜಧಾನಿಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಬೆಂಗಳೂರು ಅಷ್ಟೇ ಅಲ್ಲ.. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೊನಾ ಕೇಸ್ಗಳ ಸಂಖ್ಯೆ ಮೆಲ್ಲನೆ ತಲೆದೋರಿದೆ. ಹಲವು ಜಿಲ್ಲೆಗಳಲ್ಲಿ ಕೊವಿಡ್ 19 ಕ್ರಿಮಿ ಕಾಣಿಸಿಕೊಂಡು ರಾಜ್ಯದ ಜನರನ್ನ ಆತಂಕಕ್ಕೆ ತಳ್ಳಿದೆ.
ದಕ್ಷಿಣ ಕನ್ನಡದಲ್ಲಿ ಒಂದು ಕೊರೊನಾ ಸೋಂಕು ಪಾಸಿಟಿವ್ ಕೇಸ್ ದಾಖಲಾಗಿದೆ. ಮೈಸೂರು ಭಾಗದಲ್ಲಿ 3 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ವಿಜಯನಗರದಲ್ಲಿ ಒಂದು ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಮೊನ್ನೆ 47 ಇದ್ದ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ನಿನ್ನೆಗೆ 80ಕ್ಕೆ ಏರಿಕೆಯಾಗಿದೆ.
ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಸೋಂಕು ಹೆಚ್ಚುತ್ತಿದ್ದು ರಾಜ್ಯ ಸರ್ಕಾರ ಅಲರ್ಟ್ ಘೋಷಿಸಿದೆ. ಸಿಎಂ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದು ಅಗತ್ಯಬಿದ್ರೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಈ ಬೆನ್ನಲ್ಲೇ ಆರೋಗ್ಯ ಇಲಾಖೆ ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ. ಕೋವಿಡ್ ಸ್ಥಿತಿಗತಿ ನೋಡಿಕೊಂಡು ಕಠಿಣ ರೂಲ್ಸ್ ಜಾರಿ ಮಾಡುವ ಚಿಂತನೆಯಲ್ಲಿದೆ. ರೂಪಾಂತರಿ ರೂಪದಲ್ಲಿ ಅಬ್ಬರಿಸ್ತಿರೋ ಕೊರೊನಾಗೆ ಕಡಿವಾಣ ಹಾಕಲು ಸರ್ಕಾರ ಸಕಲ ತಯಾರಿ ಮಾಡಿಕೊಳ್ತಿದೆ. ಹಿಂದಿನ ಪರಿಸ್ಥಿತಿ ಉದ್ಭವಿಸಿದ್ರೆ ಯುದ್ಧೋಪಾದಿಯಲ್ಲಿ ನುಗ್ಗುವಂತೆ ಆರೋಗ್ಯ ಸಿಬ್ಬಂದಿಗೂ ಸೂಚನೆ ನೀಡಲಾಗಿದೆ.
ಶೀತ-ಜ್ವರ ಇದ್ದ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು. ಶಾಲೆಗಳೂ ಕೂಡ ಇಂಥ ಮಕ್ಕಳಿಗೆ ರಜೆ ನೀಡಬೇಕು. ಈ ಬಗ್ಗೆ ಶೀಘ್ರದಲ್ಲೇ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಮೇ 29 ರಿಂದ ರಾಜ್ಯಾದ್ಯಂತ ಶಾಲೆಗಳು ಪುನರ್ ಆರಂಭ ಆಗುತ್ತಿವೆ.
ರಾಜ್ಯದಲ್ಲಿ ಮುಂದಿನ 6 ದಿನಗಳ ಕಾಲ ಭಾರೀ ಮಳೆ; ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ


