ಬೆಂಗಳೂರು: ರಾಜ್ಯ ಸರ್ಕಾರದ 2008ರ ವಿದ್ಯುತ್ ಸಬ್ಸಿಡಿ ನೀತಿಯು ತಾರತಮ್ಯದಿಂದ ಕೂಡಿದ್ದು, ಅದು ಅಸಂವಿಧಾನಿಕವೆಂದು ಘೋಷಿಸುವ ಮೂಲಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಜತೆಗೆ, ಸಬ್ಸಿಡಿ ನೀತಿಯನ್ನು ಪುನರ್ರೂಪಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಸೊಸೈಟಿ ರಚಿಸಿಕೊಂಡು ಏತ ನೀರಾವರಿ ವ್ಯವಸ್ಥೆ ಮೂಲಕ ಕೃಷಿ ಚಟುವಟಿಕೆ ನಡೆಸುತ್ತಿರುವ ರೈತರಿಗೂ ಸಬ್ಸಿಡಿ (ಕೃಷಿ ವಿದ್ಯುತ್ ದರಪಟ್ಟಿ ಪ್ರೋತ್ಸಾಹ ಧನ) ವಿಸ್ತರಿಸುವ ಸಂಬಂಧ ಹಾಲಿ ಇರುವ ಕಾನೂನು ಚೌಕಟ್ಟು ತಿದ್ದುಪಡಿ ಮಾಡಿ, ಆರು ತಿಂಗಳಲ್ಲಿ ಮಾರ್ಗಸೂಚಿ ರೂಪಿಸಬೇಕೆಂದು ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶ್ರೀಮಂತ (ತಾತ್ಯಾ) ಪಾಟೀಲ್ ನೀರು ಬಳಕೆದಾರರ ಸಂಘ ಮತ್ತು ರವಳನಾತ್ ಏತ ನೀರು ಬಳಕೆದಾರರ ಸಂಘಗಳು ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಪೀಠದಲ್ಲಿಆಲಿಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿದೆ.
ಪರಿಷ್ಕೃತ ಚೌಕಟ್ಟಿನ ಬಳಿಕ ವಿದ್ಯುತ್ ಸಬ್ಸಿಡಿ
ವಾದ – ಪ್ರತಿವಾದ ಆಲಿಸಿದ ನ್ಯಾಯಾಲಯ, ”ವಿದ್ಯುತ್ ಸಬ್ಸಿಡಿ ವಿಚಾರದಲ್ಲಿ ರೈತ ಸೊಸೈಟಿಗಳನ್ನು ವೈಯಕ್ತಿಕ ರೈತರಿಗೆ ಸಮನಾಗಿ ಕಾಣುವ ಸಂಬಂಧ ರಾಜ್ಯ ಸರ್ಕಾರ, ಹೆಸ್ಕಾಂ ಸೇರಿ ಸಕ್ಷಮ ಪ್ರಾಧಿಕಾರಗಳು ಪರಿಶೀಲಿಸಿ, ಹಾಲಿ ಇರುವ ನೀತಿಯ ಚೌಕಟ್ಟನ್ನು ತಿದ್ದುಪಡಿ ಮಾಡಬೇಕು. ರೈತ ಸೊಸೈಟಿಗಳಿಗೆ ಕೃಷಿ ಸಬ್ಸಿಡಿ ವಿಸ್ತರಿಸುವ ಸಂಬಂಧ ಆರು ತಿಂಗಳಲ್ಲಿಸೂಕ್ತ ಮಾರ್ಗಸೂಚಿ ರೂಪಿಸಬೇಕು. ಪರಿಷ್ಕೃತ ಚೌಕಟ್ಟಿನ ಬಳಿಕ ವಿದ್ಯುತ್ ಸಬ್ಸಿಡಿ ನೀಡುವ ಸಂಬಂಧ ಅರ್ಜಿದಾರರು ವಿಸ್ತೃತ ಮನವಿ ಸಲ್ಲಿಸಬಹುದು” ಎಂದು ನ್ಯಾಯಪೀಠ ಆದೇಶಿಸಿದೆ.
ನೀತಿ ಪರಿಶೀಲಿಸಿ ಅದಕ್ಕೆ ತಿದ್ದುಪಡಿ ಮಾಡಬೇಕು
”ಪ್ರತಿಯೊಬ್ಬ ರೈತನ ತಲಾದಾಯ ವಿದ್ಯುತ್ ಬಳಕೆ ಭೂಮಿ ಮಾಲೀಕತ್ವ ಅಥವಾ ಪ್ರತಿಯೊಬ್ಬ ಸದಸ್ಯರ ಸರಾಸರಿ ವಿದ್ಯುತ್ ಬಳಕೆ ಆಧರಿಸಿ ನೋಂದಾಯಿತ ರೈತ ಸೊಸೈಟಿಗಳಿಗೆ ವಿದ್ಯುತ್ ಬಳಕೆಗೆ ಸಂಬಂಧಿಸಿದ ಪ್ರೋತ್ಸಾಹ ಧನ ನೀಡುವ ಸಂಬಂಧ ಹಾಲಿ ಇರುವ ನೀತಿ ಪರಿಶೀಲಿಸಿ ಅದಕ್ಕೆ ತಿದ್ದುಪಡಿ ಮಾಡಬೇಕು” ಎಂದೂ ನ್ಯಾಯಾಲಯ ಹೇಳಿದೆ.
”ರೈತರು ಕ್ಷಮತೆ ಮತ್ತು ಸುಸ್ಥಿರತೆ ಹೆಚ್ಚಿಸಲು ಸೊಸೈಟಿ ಮಾಡಿಕೊಂಡಿದ್ದು, ಅವರನ್ನು ದಂಡಿಸುವುದು ಅಸಮರ್ಥನೀಯ ಕ್ರಮ. ಸೊಸೈಟಿಯಲ್ಲಿರುವ ರೈತರ ವಿದ್ಯುತ್ ಬಳಕೆಯು ನಿಗದಿತ ವಿದ್ಯುತ್ ಬಳಕೆದಾರರಗಿಂತ ಹೆಚ್ಚಾಗಿದೆ ಎಂಬ ಕಾರಣಕ್ಕೆ ಅವರಿಗೆ ಪ್ರೋತ್ಸಾಹಧನ ನಿರಾಕರಿಸುವುದು ಅಸಾಂವಿಧಾನಿಕ. ಇದು ತಾರತಮ್ಯದ ಕ್ರಮವಾಗಿದ್ದು, ಕೃಷಿ ಪ್ರೋತ್ಸಾಹ ಧನಗಳ ಉದ್ದೇಶಗಳಿಗೆ ಹೊಂದಿಕೆಯಾಗುವುದಿಲ್ಲ,” ಎಂದು ತಿಳಿಸಿದೆ.
ಅರ್ಜಿದಾರರ ವಾದ ಮಂಡಿಸಿದ ವಕೀಲ ಶ್ರೀಧರ್ ಪ್ರಭು, ‘ಧಿ’ರೈತರು ಸೊಸೈಟಿ ರೂಪಿಸಿಕೊಂಡಿರುವುದರಿಂದ ವಿದ್ಯುತ್ ಪೂರೈಕೆಧಿಗೆ ಸಬ್ಸಿಡಿ ಇಲ್ಲ. ಏಕೆಂದರೆ ಸಬ್ಸಿಡಿ ವ್ಯವಸ್ಥೆಯು ವ್ಯಕ್ತಿಗತ ರೈತರಿಗೆ ಮಾತ್ರ ಎಂದು ಹೇಳಲಾಗುತ್ತಿದೆ. ವ್ಯಕ್ತಿಗತ ಮತ್ತು ಸಹಕಾರಿ ರೈತರೊಬ್ಬರು ಬಳಸುವ ತಲಾ ವಿದ್ಯುತ್ ಒಂದೇ ಆಗಿದೆ. ಅದಾಗ್ಯೂ, ಸಬ್ಸಿಡಿಗೆ ಸೊಸೈಟಿ ರೂಪಿಸಿಕೊಂಡಿರುವ ರೈತರನ್ನು ಪರಿಗಣಿಸದಿರುವುದು ಏಕಪಕ್ಷೀಯ ಕ್ರಮ. ಸಬ್ಸಿಡಿಯು ತಾರತಮ್ಯ ಮಾತ್ರವಲ್ಲದೇ ವಿದ್ಯುಚ್ಛಕ್ತಿ ಕಾಯಿದೆ- 2003ರ ಸೆಕ್ಷನ್ 55ರ ಉಲ್ಲಂಘನೆಯಾಗಿದೆ,’ಧಿ’ ಎಂದು ಹೇಳಿದ್ದರು.
ಪ್ರಕರಣದ ಹಿನ್ನೆಲೆ ಏನು?
ಶ್ರೀಮಂತ (ತಾತ್ಯಾ) ಪಾಟೀಲ್ ನೀರು ಬಳಕೆದಾರರ ಸಂಘ ಮತ್ತು ರವಳನಾತ್ ಏತ ನೀರು ಬಳಕೆದಾರರ ಸಂಘಗಳು ಹೆಸ್ಕಾಂನ ನೋಂದಾಯಿತ ಗ್ರಾಹಕರಾಗಿದ್ದು, ಏತ ನೀರಾವರಿ ಯೋಜನೆ/ ಏತ ನೀರಾವರಿ ಸೊಸೈಟಿಯನ್ವಯ ಅವರಿಗೆ 90 ಅಶ್ವಶಕ್ತಿ ಹಾಗೂ 100 ಅಶ್ವಶಕ್ತಿ ವಿದ್ಯುತ್ ಮಂಜೂರು ಮಾಡಲಾಗಿತ್ತು. ಅದರ ಭಾಗವಾಗಿ ಅರ್ಜಿದಾರರು ಅಥಣಿಯ ಪಾರ್ಥನಹಳ್ಳಿ ಮತ್ತು ಮದಭಾವಿಯಲ್ಲಿ ಅಂದಾಜು 5,79,65,417 ರೂ. ವೆಚ್ಚದಲ್ಲಿ ಕ್ರಮವಾಗಿ 200 ಮತ್ತು 103 ಎಕರೆಗೆ ನೀರುಣಿಸಲು ಕೃಷ್ಣಾ ನದಿಗೆ ಏತ ನೀರಾವರಿ ಯೋಜನೆ ನಿರ್ಮಿಸಿದ್ದಾರೆ. ಎಲ್ಲಾ ರೈತರು ಸೇರಿ ಬಳಕೆ ಮಾಡುವ ವಿದ್ಯುತ್ (ರೈತರ ಸೊಸೈಟಿ) ನಿಗದಿತ ವಿದ್ಯುಚ್ಛಕ್ತಿ ಬಳಕೆ ಮೀರುತ್ತದೆಂಬ ಕಾರಣಕ್ಕಾಗಿ ಸಬ್ಸಿಡಿ ನಿರಾಕರಿಸುವ ರಾಜ್ಯ ಸರ್ಕಾರದ 2008 ರ ಸೆಪ್ಟೆಂಬರ್ 4 ರ ಆದೇಶ ರದ್ದು ಕೋರಿ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.


