ಬೆಂಗಳೂರು: ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿ ಕೂಲಿ ಕಾರ್ಮಿಕರು ವಾಸವಿದ್ದ 20ಕ್ಕೂ ಹೆಚ್ಚು ಶೆಡ್ಗಳು ಬೆಂಕಿಗಾಹುತಿ ಆಗಿರುವಂತಹ ಘಟನೆ ನಗರದ ವೀರಣ್ಣಪಾಳ್ಯ ಮುಖ್ಯ ರಸ್ತೆಯ ಬಳಿ ನಡೆದಿದೆ. ಬೆಂಕಿ ಅವಘಡದಿಂದ ಆಟಿಕೆ ಫ್ಯಾಕ್ಟರಿಯ ಕಾರ್ಮಿಕರಿಗಾಗಿ ನಿರ್ಮಿಸಲಾಗಿದ್ದ 50 ಪೈಕಿ 20 ಶೆಡ್ಗಳು ಬೆಂಕಿಗಾಹುತಿ ಆಗಿವೆ.
ಶೆಡ್ನಲ್ಲಿದ್ದ ಸಾಮಗ್ರಿಗಳು ಸಂಪೂರ್ಣ ಸುಟ್ಟುಹೋಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಆಟಿಕೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಜನರಿಗಾಗಿ ವೀರನಪಾಳ್ಯ ಮುಖ್ಯ ರಸ್ತೆಯ ಖಾಸಗಿ ಶಾಲೆ ಪಕ್ಕದಲ್ಲಿದ್ದ ಶೆಡ್ಗಳನ್ನು ನಿರ್ಮಿಸಲಾಗಿದೆ. ಮೊದಲಿಗೆ ಒಂದು ಶೆಡ್ನಲ್ಲಿ ಬೆಂಕಿ ಕಾಣಿಸಿಕೊಂಡು ಬಳಿಕ ಇತರೆ ಶೆಡ್ಗಳಿಗೂ ಹಬ್ಬಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಜನರು ಹೊರಗೆ ಓಡಿ ಬಂದಿದ್ದಾರೆ. ಸದ್ಯ ಬೆಂಕಿ ಅವಘಡದಿಂದ ರಾಯಚೂರು ಮೂಲದ ಕೂಲಿ ಕಾರ್ಮಿಕರ ಜೀವನ ಬೀದಿಗೆ ಬಂದಿದೆ.
ಅನೇಕ ವರ್ಷಗಳಿಂದ ಮಕ್ಕಳು, ಮಹಿಳೆಯರು ಚಿಕ್ಕ ಚಿಕ್ಕ ಶೆಡ್ಗಳಲ್ಲಿ 100ಕ್ಕೂ ಹೆಚ್ಚು ಜನರು ಇಲ್ಲೇ ವಾಸವಿದ್ದರು. ಬೆಂಕಿಯ ಜ್ವಾಲೆಗೆ ಶೆಡ್ಗಳು ಬೆಂಕಿಗಾಹುತಿ ಹಿನ್ನಲೆ ರಾತ್ರಿಯಿಡಿ ದೇಗುಲದ ಅಂಗಳದಲ್ಲಿ ಮಲಗಿದ್ದಾರೆ.
ಇತ್ತ ಬೆಳಗ್ಗೆ ಜಾಗದ ಮಾಲೀಕ ಸ್ಥಳಕ್ಕೆ ಬಂದು ಇತರೆ ಶಡ್ಗಳಲ್ಲಿರುವ ಜನರಿಗೆ ಆದಷ್ಟು ಬೇಗ ಎಲ್ಲರೂ ಮನೆ ಖಾಲಿ ಮಾಡಲು ಸೂಚಿಸಿದ್ದು, ಮಾಲೀಕನ ಮಾತು ಕೇಳಿ ಬಡ ಜನರು ತಬ್ಬಿಬ್ಬಾಗಿದ್ದಾರೆ. ಇದ್ದಕ್ಕಿದ್ದಂತೆ ಹೋಗಿ ಅಂದರೆ ಎಲ್ಲಿಗೆ ಹೋಗೋದು. ಮನೆಯಲ್ಲಿದ್ದ ಅಲ್ಪಸ್ವಲ್ಪ ಹಣ, ಸಾಮಾಗ್ರಿ ಕೂಡ ಬೆಂಕಿಗಾಹುತಿ ಆಗಿದೆ. ಸರ್ಕಾರ ಏನಾದರೂ ಸಹಾಯ ಮಾಡಬೇಕು ಅಂತ ಕಣ್ಣೀರು ಹಾಕಿದ್ದಾರೆ.


