ಬೆಂಗಳೂರು: ವರ್ಷಗಳಿಂದ ಸಂಗ್ರಹವಾಗದ ಸಂಪನ್ಮೂಲಗಳಿಂದಲೇ ದುಪ್ಪಟ್ಟಿಗಿಂತ ಹೆಚ್ಚು ಹಣ ಸಂಗ್ರಹಿಸುವತ್ತ ಚಿತ್ತ ಹರಿಸಿರುವ ಬಿಬಿಎಂಪಿ ಬಜೆಟ್, ಕಳೆದ ವರ್ಷಕ್ಕಿಂತ ಶೇ 50ರಷ್ಟು ಹೆಚ್ಚು ಸ್ವೀಕೃತಿಯ ನಿರೀಕ್ಷೆ ಹೊಂದಿದೆ. ಅದರ ಒಂದು ಭಾಗವಾಗಿ ಕೆಂಪೇಗೌಡ ಜಯಂತಿಗೆ ಅನುದಾನ ಕಡಿತಗೊಳಿಸಿದೆ.
2025–26ನೇ ಸಾಲಿನಲ್ಲಿ ರಾಜ್ಯ, ಕೇಂದ್ರ ಸರ್ಕಾರದ ಅನುದಾನ ಹಾಗೂ ವಿಶ್ವಬ್ಯಾಂಕ್ ಸಾಲವನ್ನು ಹೊರತುಪಡಿಸಿದಂತೆ ಬಿಬಿಎಂಪಿ ₹11,149.17 ಕೋಟಿ ಸಂಪನ್ಮೂಲವನ್ನು ಸಂಗ್ರಹಿಸಬೇಕಿದೆ. 2024–25ನೇ ಸಾಲಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನಗಳನ್ನು ಸೇರಿಸಿಯೂ ಸಂಗ್ರಹಿಸಿರುವ ಸಂಪನ್ಮೂಲ ₹10,318 ಕೋಟಿಯಷ್ಟಿದೆ. ಹೀಗಾಗಿ, ಇರುವ ಸಂಗ್ರಹವನ್ನೇ ಹೆಚ್ಚಿಸಿಕೊಳ್ಳಲು ನಿರ್ಧರಿಸಿದೆ.
ಜಾಹೀರಾತು ಕರ, ಇ–ಖಾತೆ ವರ್ಗಾವಣೆ, ಸ್ವತ್ತುಗಳ ಬಾಡಿಗೆ, ಚಿತಾಗಾರದ ಶುಲ್ಕ, ಒಎಫ್ಸಿ ತೆರಿಗೆಗಳನ್ನು ಕಳೆದ ವರ್ಷಕ್ಕಿಂತ ಬಹುತೇಕ ದ್ವಿಗುಣಗೊಳಿಸಿಕೊಳ್ಳಲು ಅಂದಾಜಿಸಲಾಗಿದೆ. ಈ ಸಂಗ್ರಹಗಳು ಹಿಂದಿನ ವರ್ಷಗಳಲ್ಲಿ ನಿರೀಕ್ಷೆಗಿಂತ ಅರ್ಧದಷ್ಟು ಮಾತ್ರ ಸಾಧನೆ ಮಾಡಿವೆ.
ರಾಜ್ಯ ಸರ್ಕಾರದ ₹4 ಸಾವಿರ ಕೋಟಿ ಅನುದಾನದ ಜೊತೆಗೆ ₹2 ಸಾವಿರ ಕೋಟಿಯನ್ನು ಬಿಬಿಎಂಪಿ ಪ್ರತಿವರ್ಷ ವಿಶೇಷ ಉದ್ದೇಶಿಕ ಘಟಕಕ್ಕೆ (ಎಸ್ಪಿವಿ) ಒದಗಿಸಬೇಕು. ಜಾಹೀರಾತು ನೀತಿ, ಪ್ರೀಮಿಯಂ ಎಫ್ಎಆರ್ನಿಂದ ಸಂಗ್ರಹವಾಗುವ ಹಣವನ್ನು ನೀಡಲಾಗುತ್ತದೆ ಎಂದು ಹೇಳಲಾಗಿದ್ದು, ಅದು ಸಂಗ್ರಹವಾಗುವ ಲಕ್ಷಣಗಳಿಲ್ಲ.
ಇನ್ನು ‘ಬ್ರ್ಯಾಂಡ್ ಬೆಂಗಳೂರು’ ಯೋಜನೆಗಳಿಗಾಗಿಯೇ ಈ ವರ್ಷ ₹1,360 ಕೋಟಿ ಒದಗಿಸಬೇಕು. ಪಾಲಿಕೆ ಸಂಪನ್ಮೂಲದಿಂದಲೇ ಹಣ ಎಸ್ಕ್ರೊಗೆ ವರ್ಗಾವಣೆಯಾಗಬೇಕು. ಅದು ಸಾಧ್ಯವಾಗದಿದ್ದರೆ ಬ್ರ್ಯಾಂಡ್ ಬೆಂಗಳೂರು ಯೋಜನೆಗಳು ಸ್ಥಗಿತವಾಗುತ್ತವೆ.
ಆಡಳಿತ, ಸಿಬ್ಬಂದಿ ವೆಚ್ಚ ಹಾಗೂ ಘನತ್ಯಾಜ್ಯ ನಿರ್ವಹಣೆಗೆ ₹3,500 ಕೋಟಿ ವೆಚ್ಚವಾಗಲಿದೆ. ಕಾರ್ಯಾಚರಣೆ ಹಾಗೂ ನಿರ್ವಹಣೆಗೆ ಸುಮಾರು ₹2 ಸಾವಿರ ಕೋಟಿಯಾಗಲಿದೆ. ಬಿಬಿಎಂಪಿ ಆಸ್ತಿ ತೆರಿಗೆಯ ಬಾಬ್ತಿನಲ್ಲಿ ಬರುವ ಹಣವೆಲ್ಲ ಇದಕ್ಕೇ ಸರಿಹೊಂದುತ್ತದೆ. ಇನ್ನುಳಿದ ನಿರೀಕ್ಷಿತ ಆದಾಯಗಳು ಬಂದರೆ ಮಾತ್ರ ವಾರ್ಡ್ ಮಟ್ಟದ ಕಾಮಗಾರಿಗಳು ಆರಂಭವಾಗುತ್ತವೆ.
ವಲಯಗಳಲ್ಲಿ ತಾರತಮ್ಯ: ಕೆಲವು ವರ್ಷಗಳಿಂದ ಹೇಳುತ್ತಿದ್ದ ವಲಯವಾರು ಬಜೆಟ್ ಮಂಡನೆಯಾಗದಿದ್ದರೂ, ಯಾವ ವಲಯಕ್ಕೆ ಯಾವ ಕಾರ್ಯಕ್ರಮದಲ್ಲಿ ಎಷ್ಟು ಹಣ ನೀಡಲಾಗುತ್ತಿದೆ ಎಂಬ ವಿವರವನ್ನು ‘ಆಯವ್ಯಯದ ಅಂದಾಜುಗಳು’ ಪುಸ್ತಕದಲ್ಲಿ ವಿವರಿಸಲಾಗಿದೆ. ಬಹುತೇಕ ಎಲ್ಲ ಕಾಮಗಾರಿಗಳನ್ನೂ ಕೇಂದ್ರದಲ್ಲೇ ಉಳಿಸಿಕೊಂಡಿದ್ದು, ಅತಿಹೆಚ್ಚು ತೆರಿಗೆ ಪಾವತಿಸುವ ಮಹದೇವಪುರಕ್ಕೆ ಕಡಿಮೆ ಕಾಮಗಾರಿಗಳನ್ನು ನೀಡಲಾಗಿದೆ.
ಕೆಂಪೇಗೌಡ ಜಯಂತಿಗೆ ಅನುದಾನ ಕಡಿತ
ಬಿಬಿಎಂಪಿ ಬಜೆಟ್ನಲ್ಲಿ ನಾಡಪ್ರಭು ಕೆಂಪೇಗೌಡ ದಿನಾಚರಣೆಗೆ ₹50 ಲಕ್ಷ ಅನುದಾನವನ್ನು ಕಡಿತ ಮಾಡಲಾಗಿದೆ. ಕಳೆದ ವರ್ಷ ₹3 ಕೋಟಿಯಿದ್ದ ಅನುದಾನ ಈ ವರ್ಷ ₹2.5 ಕೋಟಿಯಾಗಿದೆ. ಕಡಲೆಕಾಯಿ ಪರಿಷೆಗೆ ನೀಡಲಾಗುವ ಅನುದಾನವನ್ನು ₹60 ಲಕ್ಷದಿಂದ ₹50 ಲಕ್ಷಕ್ಕೆ ಇಳಿಸಲಾಗಿದೆ. ನಗರದಲ್ಲಿ ದಸರಾ ಉತ್ಸವಗಳಿಗೂ ₹20 ಲಕ್ಷ ಕಡಿತ ಮಾಡಲಾಗಿದೆ.
ಬೆಸ್ಕಾಂ ಸಹಾಯವಾಣಿ: ವಿದ್ಯುತ್ ಸಂಬಂಧಿತ ದೂರುಗಳು ಶೀಘ್ರ ಪರಿಹಾರಬೇಕೇ? ಈ ವಾಟ್ಸಾಪ್ ನಂಬರ್ಗಳನ್ನು ಸಂಪರ್ಕಿಸಿ


