ಬೆಂಗಳೂರು: ರಾಜ್ಯದಲ್ಲಿ ಇತ್ತೀಚಗೆ ಭಾರಿ ಸದ್ದು ಮಾಡಿದ ವಿಚಾರವೆಂದರೆ ಅದು ಸ್ಮಾರ್ಟ್ ಮೀಟರ್ ಹಗರಣ. ಸ್ಮಾರ್ಟ್ ಮೀಟರ್ ಅಳವಡಿಕೆ ಯೋಜನೆಯಡಿ ದುಪ್ಪಟ್ಟು ಹಣ ವಸೂಲಿ ಮಾಡಲು ಬೆಸ್ಕಾಂ ಮುಂದಾಗಿದೆ ಎಂದು ಸುದ್ದಿ ಭಾರಿ ಚರ್ಚೆಯಾಯಿತು. ಖಾಸಗಿ ಕಂಪನಿಯೊಂದಕ್ಕೆ ಟೆಂಟರ್ ನೀಡಿರುವ ವಿಚಾರವೂ ಗೊತ್ತಾಯ್ತು. ಇದರ ಬೆನ್ನಲ್ಲೇ ಈ ಕುರಿತು ಯಾವುದೇ ಸುದ್ದಿ ಪ್ರಸಾರ ಮಾಡದಂತೆ ಸ್ಮಾರ್ಟ್ ಮೀಟರ್ ಟೆಂಡರ್ ಪಡೆದಿರುವ ಕಂಪನಿ ಕೋರ್ಟ್ನಿಂದ ತಡೆಯಾಜ್ಞೆ ತಂದಿದೆ.
ಜನರಿಂದ ಹಣದ ಸುಲಿಗೆ ಮಾಡಲು ಸ್ಮಾರ್ಟ್ ಮೀಟರ್ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಖಾಸಗಿ ಕಂಪನಿ ಒಂದಕ್ಕೆ ಟೆಂಡರ್ ಕೊಡಲಾಗಿದ್ದು, ಆ ಕಂಪನಿಗೆ ಸಾವಿರಾರು ಕೋಟಿ ರೂಪಾಯಿ ಲಾಭವಾಗಲಿದೆ ಎನ್ನಲಾಗಿದೆ. ಟೆಂಡರ್ ನೀಡುವಾಗ ಅಕ್ರಮ ಎಸಗಲಾಗಿದೆ ಎಂಬ ಆರೋಪವೂ ಇದೆ. ಈ ಹಿನ್ನೆಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಇದೊಂದು ದೊಡ್ಡ ಹಗರಣ ಎಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾಯಕರು ಕೂಡ ಧ್ವನಿ ಎತ್ತಿದ್ದಾರೆ. ಆದರೆ, ಈಗ ಯಾವುದೇ ಸುದ್ದಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿರುವುದು ನಾನಾ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಕೆಪಿಟಿಸಿಎಲ್ನಲ್ಲಿ ಸ್ಮಾರ್ಟ್ ಮೀಟರ್ಗೆ ಶೆಡ್ಯೂಲ್ ಆಫ್ ರೇಟ್ ಇರೋದು 2,400 ರೂಪಾಯಿ. ಆದರೆ, ಜಿಎಸ್ಟಿ ಸೇರಿದಂತೆ 4,998 ರೂಪಾಯಿ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪವಿದೆ. ಈ ಮೂಲಕ ಗ್ರಾಹಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಲು ಮುಂದಾಗಿದೆ ಎನ್ನಲಾಗಿದೆ.
ಬೆಸ್ಕಾಂ ಸೇರಿ ಎಲ್ಲ ಎಸ್ಕಾಂಗಳ ಸ್ಮಾರ್ಟ್ ಮೀಟರ್ ಖರೀದಿ ಟೆಂಡರ್ನಲ್ಲಿ 15,568 ಕೋಟಿ ರೂ. ಮೊತ್ತದ ಹಗರಣ ಆಗಿದೆ. ಇದು ರಾಜ್ಯದ ದೊಡ್ಡ ಹಗರಣ ಎಂದು ಶಾಸಕ ಅಶ್ವಥ್ ನಾರಾಯಣ್ ಕೂಡ ಬಾಂಬ್ ಸಿಡಿಸಿದ್ದಾರೆ.









