BBMP
Loading ...

BESCOM Scam

ಬೆಂಗಳೂರು: ಬೆಸ್ಕಾಂ ಸೇರಿ ಎಲ್ಲ ಎಸ್ಕಾಂಗಳ ಸ್ಮಾರ್ಟ್ ಮೀಟರ್ ಖರೀದಿ ಟೆಂಡರ್‌ನಲ್ಲಿ 15,568 ಕೋಟಿ ರೂ. ಮೊತ್ತದ ಹಗರಣ ಆಗಿದೆ. ಇದು ರಾಜ್ಯದ ದೊಡ್ಡ ಹಗರಣ ಎಂದು ಶಾಸಕ ಅಶ್ವಥ್ ನಾರಾಯಣ್ ಬಾಂಬ್ ಸಿಡಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಎಸ್.ಆರ್ ವಿಶ್ವನಾಥ್ ಅವರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಸ್ಮಾರ್ಟ್ ಮೀಟರ್ ಹಗರಣ ಆರೋಪ ಕುರಿತು ಮಾತನಾಡಿದ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್, ಸ್ಮಾರ್ಟ್ ಮೀಟರ್‌ಗಳ ಖರೀದಿಯಲ್ಲಿ ಸಾಕಷ್ಟು ಅವ್ಯವಹಾರ ಆಗಿದೆ. ನಾನು, ವಿಶ್ವನಾಥ್ ಇಬ್ಬರು ಸದನದಲ್ಲೂ ಇದರ ಬಗ್ಗೆ ಮಾತಾಡಿದ್ದೇವೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಸರ್ಕಾರ ಅವ್ಯವಹಾರ ನಡೆಸಿದೆ. ನಮ್ಮ ಆರೋಪಕ್ಕೆ ಸದನದಲ್ಲೇ ಉತ್ತರ ಕೊಡುತ್ತೇನೆ ಎಂದು ಇಂಧನ ಸಚಿವರು ಹೇಳಿದ್ದರು. ಆದರೆ, ಸದನಕ್ಕೆ ಆ ದಿನ ಬಂದಿದ್ದರೂ ಕೂಡ ಸಚಿವ ಜಾರ್ಜ್ ನಾಪತ್ತೆಯಾಗಿದ್ದರು. ನಮ್ಮ ಆರೋಪಗಳಿಗೆ ಸಚಿವರು ಉತ್ತರ ಕೊಡಲಿಲ್ಲ. ಆದರೆ ಸೋಮವಾರ ಅಧಿಕಾರಿಗಳ ಮೂಲಕ ಹಗರಣ ಆಗಿಲ್ಲ ಎಂದು ಸರ್ಕಾರ ಹೇಳಿಸಿದೆ ಎಂದು ತಿಳಿಸಿದರು.

ಬೆಸ್ಕಾಂ (BESCOM) ಸೇರಿ ಎಲ್ಲ ಎಸ್ಕಾಂಗಳ ಸ್ಮಾರ್ಟ್ ಮೀಟರ್ ಖರೀದಿ ಟೆಂಡರ್‌ನಲ್ಲಿ 15,568 ಕೋಟಿ ರೂ. ಮೊತ್ತದ ಹಗರಣ ಆಗಿದೆ. ಇದೊಂದು ರಾಜ್ಯದ ದೊಡ್ಡ ಹಗರಣವಾಗಿದೆ. ಸ್ಮಾರ್ಟ್ ಮೀಟರ್ ಕಡ್ಡಾಯನಾ? ಕೆಇಆರ್‌ಸಿ ಗೈಡ್‌ಲೈನ್ಸ್ ಪ್ರಕಾರ ಸ್ಮಾರ್ಟ್ ಮೀಟರ್ ಕಡ್ಡಾಯ ಮಾಡುವಂತಿಲ್ಲ. ತಾತ್ಕಾಲಿಕ ಗ್ರಾಹಕರಿಗೆ ಮಾತ್ರ ಕಡ್ಡಾಯ ಮಾಡಬಹುದೇ ಹೊರತು ಹೊಸ ಗ್ರಾಹಕರಿಗೆ ಕಡ್ಡಾಯ ಮಾಡುವಂತಿಲ್ಲ. ಇನ್ನೂ ಸ್ಮಾರ್ಟ್ಮೀಟರ್‌ಗಳ ಖರೀದಿಯಲ್ಲಿ ಕೆಟಿಪಿಪಿ ಕಾಯ್ದೆ ಉಲ್ಲಂಘನೆಯಾಗಿದೆ. ರಾಜಶ್ರೀ ಕಂಪನಿಗೆ ಅನುಕೂಲ ಆಗುವಂತೆ ಟೆಂಡರ್ ಕೊಟ್ಟಿದ್ದಾರೆ. ಕೆಟಿಪಿಪಿ ಕಾಯ್ದೆ ಪ್ರಕಾರ ಟೆಂಡರ್ ಪಡೆದುಕೊಳ್ಳುವ ಸಂಸ್ಥೆ ಬಳಿ 6,800 ಕೋಟಿ ರೂ. ಬಿಡ್ ಸಾಮರ್ಥ್ಯ ಮೊತ್ತ ಇರಬೇಕು. ಆದರೆ ಟೆಂಡರ್ ಪಡೆದ ರಾಜಶ್ರೀ ಕಂಪನಿ ಬಳಿ ಇದ್ದಿದ್ದು ಕೇವಲ 400 ಕೋಟಿ ರೂ. ಅಷ್ಟೇ. ಟೆಂಡರ್ ಮೌಲ್ಯ 1,920 ಕೋಟಿ ಇಡಬೇಕಿತ್ತು. ಆದರೆ ಟೆಂಡರ್‌ನಲ್ಲಿ ಇಟ್ಟಿದ್ದು ಕೇವಲ 107 ಕೋಟಿ ರೂ. ಬ್ಲಾಕ್‌ಲಿಸ್ಟ್ನಲ್ಲಿ ಇರುವ ಸಂಸ್ಥೆಗೆ ಟೆಂಡರ್ ಕೊಡುವಂತಿಲ್ಲ ಅಂತ ಕೆಟಿಪಿಪಿ ಕಾಯ್ದೆಯಲ್ಲಿದೆ. ಆದರೆ ಉತ್ತರ ಪ್ರದೇಶದಲ್ಲಿ ಬ್ಲಾಕ್‌ಲಿಸ್ಟ್ ಆಗಿದ್ದ ಬಿಸಿಐಟಿಎಸ್ ಕಂಪನಿಗೆ ಸಾಪ್ಟ್ವೇರ್ ಟೆಂಡರ್ ಕೊಟ್ಟಿರುತ್ತಾರೆ ಎಂದು ಆರೋಪಿಸಿದರು.

ಸ್ಮಾರ್ಟ್ಮೀಟರ್‌ಗಳ ದರಗಳಲ್ಲಿ ಬೇರೆ ರಾಜ್ಯಗಳಿಗೂ ನಮಗೂ ಬಹಳ ವ್ಯತ್ಯಾಸವಿದೆ. ಒಂದು ಮೀಟರ್‌ಗೆ ನಮ್ಮಲ್ಲಿ 8,160 ರೂ. ತೆಗೆದುಕೊಳ್ಳುತ್ತಾರೆ. ನಮ್ಮಲ್ಲಿ ತಿಂಗಳಿಗೆ ಕೊಡುವ ದರ ಹತ್ತು ವರ್ಷಗಳಿಗೆ ಲೆಕ್ಕ ಹಾಕಿದರೆ ಪ್ರತೀ ಮೀಟರ್‌ಗೆ 17 ಸಾವಿರ ರೂ. ಆಗಲಿದೆ. ಬೇರೆ ರಾಜ್ಯಗಳಲ್ಲಿ 7,400 ರೂ.ಯಿಂದ 9,260 ಆಗಲಿದೆ. ಸ್ಮಾರ್ಟ್ಮೀಟರ್ ದರ, ಸಾಫ್ಟ್ವೇರ್ ನಿರ್ವಹಣೆ ದರ ಹಾಗೂ ಸಿಬ್ಬಂದಿ ವೇತನ ದರಗಳನ್ನು ಸೇರಿಸಿ ಹತ್ತು ವರ್ಷಕ್ಕೆ ಜನರಿಂದ ಸಂಗ್ರಹ ಮಾಡುತ್ತಿದ್ದಾರೆ ಎಂದರು.

ಸ್ಮಾರ್ಟ್ಮೀಟರ್‌ಗೆ ಗ್ಲೋಬಲ್ ಟೆಂಡರ್ ಕರೆಯಬೇಕಿತ್ತು. ಆದರೆ ಇವರು ಕರೆದಿಲ್ಲ. ಭಂಡತನದಿಂದ ಕಣ್ಮುಂದೆ ಸುಳ್ಳು ಹೇಳಿ ಅವ್ಯವಹಾರ ಮಾಡಿದ್ದಾರೆ. ರಾಜಶ್ರೀ, ಸಹ್ಯಾದ್ರಿ ಹಾಗೂ ವಿಆರ್ ಪಾಟೀಲ್ ಕಂಪನಿಗಳು ಬಿಡ್ ಹಾಕಿದ್ದವು. ಇವರ ಟೆಂಡರ್ ದಾಖಲೆ ಪ್ರಕಾರ ಒಂದೇ ಒಂದು ಕಂಪನಿ ಅರ್ಹವಾಗಿದ್ದು, ಅದೇ ರಾಜಶ್ರೀ ಕಂಪನಿ ಎಂದಿದ್ದಾರೆ. ನಾವು ರಾಜಕೀಯ ಪ್ರೇರಿತ ಆರೋಪ ಮಾಡುತ್ತಿಲ್ಲ. ಸತ್ಯ ಹೇಳಿದ್ದೀವಿ. ಸರ್ಕಾರ ಎಚ್ಚೆತ್ತುಕೊಳ್ಳಬೇಕು, ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಾವು ಬಿಸಿ ಮುಟ್ಟಿಸಬೇಕಾಗುತ್ತದೆ. ಹಗಲು ದರೋಡೆ ನಿಲ್ಲಿಸಬೇಕು, ಈಗ ಆಗಿರುವ ಟೆಂಡರ್ ರದ್ದು ಮಾಡಬೇಕು. ಮತ್ತೆ ನಿಯಮಾನುಸಾರ ಟೆಂಡರ್ ಕರೆಯಲಿ ಎಂದು ಆಗ್ರಹಿಸಿದರು.

ಕೆಟಿಪಿಪಿ ಕಾಯ್ದೆ ಪ್ರಕಾರ ಸ್ಮಾರ್ಟ್ಮೀಟರ್ ಟೆಂಡರ್ ಕೊಟ್ಟಿಲ್ಲ. ಇದು ಜಿಟಿಪಿಪಿ ಕಾಯ್ದೆ, ಜಾರ್ಜ್ ಟ್ರಾನ್‌ಪರೆನ್ಸಿ ಇನ್ ಪಬ್ಲಿಕ್ ಪ್ರೊಕ್ಯೂರ್‌ಮೆಂಟ್ ಪ್ರೊಸೀಜರ್ ಕಾಯ್ದೆ. ಟೆಂಡರ್ ನಿಯಮಗಳನ್ನು ತಮಗೆ ಬೇಕಾದಂತೆ ರೂಪಿಸಿಕೊಂಡಿದ್ದಾರೆ ಎಂದರು.

ಕರೆಂಟ್‌ಗೂ ಟೋಲ್ ಮಾದರಿ ಶುಲ್ಕ: ಸ್ಮಾರ್ಟ್ ಮೀಟರ್ ಹೆಸರಲ್ಲಿ ಜನರಿಂದ ಲೂಟಿ, ಬೆಂಗಳೂರು ನಿವಾಸಿಗಳ ಆಕ್ರೋಶ

Leave a Reply

Your email address will not be published. Required fields are marked *