BBMP
Loading ...

BBMP Election

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನ ವಾರ್ಡ್‌ಗಳಿಗೆ ಹಲವು ವರ್ಷಗಳಿಂದ ಕಾರ್ಪೊರೇಟರ್‌ಗಳೇ (ಪಾಲಿಕೆ ಸದಸ್ಯರು) ಇಲ್ಲ. ಬಿಬಿಎಂಪಿ ಚುನಾವಣೆ ನಡೆಯದ ಕಾರಣ ಬೆಂಗಳೂರಿನ ವಾರ್ಡ್‌ಗಳೆಲ್ಲ ಬಡವಾಗಿದ್ದವು. ಈಗ ಬಿಬಿಎಂಪಿ ಚುನಾವಣೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ಈ ಬಗ್ಗೆ ಕಾಂಗ್ರೆಸ್‌ ಸಚಿವ ರಾಮಲಿಂಗಾರೆಡ್ಡಿ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಯಾವ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.

ಬಿಬಿಎಂಪಿ ಚುನಾವಣೆ ಬಗ್ಗೆ ಮಾತನಾಡಿರುವ ರಾಮಲಿಂಗಾ ರೆಡ್ಡಿ ಅವರು, ಈಗ ಗ್ರೇಟರ್ ಬೆಂಗಳೂರಿನಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿವೆ. ಬೆಂಗಳೂರಿನಲ್ಲೇ ಎರಡು ಅಥವಾ ಮೂರು ಪಾಲಿಕೆಗಳು ವಿಂಗಡಣೆ ಆಗಲಿದೆ. ಪ್ರತಿ ಪಾಲಿಕೆಯ ವಾರ್ಡ್‌ಗಳ ಸಂಖ್ಯೆ ಕೂಡ ಈಗಿನಂತೆ ಇರುವುದಿಲ್ಲ. ಏಕೆಂದರೆ ಈಗ ಬೆಳೆದು ನಿಂತಿರುವ ಬೆಂಗಳೂರನ್ನು ಒಬ್ಬ ಮೇಯರ್‌ ನಿಭಾಯಿಸಲು ಸಾಧ್ಯವೇ ಇಲ್ಲ. ಹೀಗಾಗಿ ಗ್ರೇಟರ್‌ ಬೆಂಗಳೂರು ನಮಗೆ ಅನಿವಾರ್ಯ ಎಂದಿದ್ದಾರೆ.

ಗ್ರೇಟರ್ ಬೆಂಗಳೂರಿಗೆ ಕಾಂಗ್ರೆಸ್‌ ಶಾಸಕರಾದ ರಿಜ್ವಾನ್ ಅರ್ಷದ್ ಅವರ ಅಧ್ಯಕ್ಷತೆಯಲ್ಲಿರುವ ಸಮಿತಿ ಈಗಾಗಲೇ ವರದಿ ನೀಡಿದೆ. ಅದರ ಆಧಾರದ ಮೇಲೆ ವಿಧಾನಮಂಡಲದಲ್ಲಿ ಈ ಮಸೂದೆಯನ್ನು ಮಂಡಿಸುತ್ತೇವೆ. ಅದು ಅಲ್ಲಿ ಅಂಗೀಕಾರಗೊಂಡ ನಂತರ ರಾಜ್ಯಪಾಲರು ಅನುಮೋದನೆ ನೀಡುತ್ತಾರೆ. ಇದರ ಆಧಾರದ ಮೇಲೆಯೇ ಬಿಬಿಎಂಪಿ ಚುನಾವಣೆ ನಡೆಯಲಿದೆ. ನೂರಕ್ಕೆ ನೂರರಷ್ಟು ಮೇ ತಿಂಗಳಿನಲ್ಲೇ ಬಿಬಿಎಂಪಿಗೆ ಚುನಾವಣೆ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿಯವರಿಗೆ ಬೆಂಗಳೂರಿನ ಅಭಿವೃದ್ಧಿಯೇ ಬೇಕಾಗಿಲ್ಲ. ಅವರಿಗೆ ಬೇಕಿರುವುದು ವೋಟ್‌ ಮಾತ್ರ. ಈ ಕಾರಣದಿಂದಲೇ ಅವರು ಗ್ರೇಟರ್ ಬೆಂಗಳೂರು ವಿಧೇಯಕವನ್ನು ವಿರೋಧಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯೇ ಆಗಿಲ್ಲ. ಅವರು ಇಡೀ ನಗರವನ್ನ ಹಾಳು ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಅವರ ಅವಧಿಯಲ್ಲಿ ಬಿಬಿಎಂಪಿಗೆ ಎಂಟು ಸಾವಿರ ಕೋಟಿ ರೂಪಾಯಿ ಅನುದಾನ ಕೊಟ್ಟೇ ಇರಲಿಲ್ಲ. ನಮ್ಮ ಕಾಂಗ್ರೆಸ್ ಸರ್ಕಾರವಿದ್ದಾಗ ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿ ಸೇರಿ ಏಳು ಸಾವಿರ ಕೋಟಿ ರೂಪಾಯಿ ಘೋಷಣೆ ಮಾಡಿದ್ದರು. ನಮ್ಮ ಸರ್ಕಾರ ಹೋದ ಮೇಲೆ ಬಿಜೆಪಿಯುವರು ನಾವು ಕೊಟ್ಟಿದ್ದ ಹಣವನ್ನೇ ಹಂಚಿಕೆ ಮಾಡಿಕೊಂಡಿದ್ದರು. ನಾವು ಅಧಿಕಾರದಲ್ಲಿದ್ದಾಗ ಬಿಜೆಪಿ ಶಾಸಕರಿಗೆ ಕಡಿಮೆ ಅನುದಾನ ಕೊಟ್ಟಿಲ್ಲ. ಬಿಜೆಪಿಯವರು ಬಂದ್ಮೇಲೆ ಕಾಂಗ್ರೆಸ್ ಶಾಸಕರಿಗೆ ಅನುದಾನ ಕಡಿಮೆ ಮಾಡಿದರು ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯವರು ಸಾಲ ಉಳಿಸಿ ಹೋಗಿದ್ದರಿಂದ ನಮಗೆ ಭಾರಿ ಸಮಸ್ಯೆಯಾಗಿದೆ. ಇದರಿಂದ ಈಗ ಹಣ ಕೊಡಲು ಆಗುತ್ತಿಲ್ಲ. ಗಾರ್ಡನ್‌ ಸಿಟಿಯಾಗಿದ್ದ ಬೆಂಗಳೂರನ್ನ ಗಾರ್ಬೇಜ್ ಸಿಟಿ ಮಾಡಿದ್ದೇ ಬಿಜೆಪಿ. ಅವರು ಅಧಿಕಾರದಲ್ಲಿದ್ದಾಗ ಅಡಮಾನ ಇಟ್ಟಿದ್ದ ಹಲವು ಕಟ್ಟಡಗಳನ್ನು ನಾವು ಬಿಡಿಸಿದ್ದೇವೆ. ಆದರೆ ಅವರು ಪ್ರತಿ ವರ್ಷ 8 ಸಾವಿರ ಕೋಟಿ ಕೊಟ್ಟಿದ್ದೇವೆ ಎಂದು ಸುಳ್ಳು ಹೇಳ್ತಿದ್ದಾರೆ. ಅವರ ಕೈಯಲ್ಲಿ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಆಗಲಿಲ್ಲ. ಈ ಬಗ್ಗೆ ಕೋರ್ಟ್‌ ಕೂಡ ಚಾಟಿ ಬೀಸುವ ಸ್ಥಿತಿಗೆ ತಂದಿದ್ದು ಬಿಜೆಪಿಯವರು ಎಂದು ಗುಡುಗಿದ್ದಾರೆ.

ಆರೋಪಿಗೆ ವಾಟ್ಸಾಪ್‌ ಮೂಲಕ ನೋಟಿಸ್‌ ಕಳುಹಿಸುವಂತಿಲ್ಲ: ಹೈಕೋರ್ಟ್‌ ಆದೇಶ

Leave a Reply

Your email address will not be published. Required fields are marked *