BBMP
Loading ...

BBMP Election

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸದ್ದಿಲ್ಲದೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಸಿದ್ಧತೆ ಶುರು ಮಾಡಿಕೊಂಡಿದೆ. ಈ ಸಂಬಂಧ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಚುನಾವಣೆಗೆ ಅಣಿಯಾಗುವಂತೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.

ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆಯಾದ ಎಚ್‌.ಎಸ್‌. ಮಂಜುನಾಥ್‌ ಅವರನ್ನು ನಗರದ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಕಚೇರಿಯಲ್ಲಿ ಗುರುವಾರ ಅಭಿನಂದಿಸಿ ಮಾತನಾಡಿದ ಶಿವಕುಮಾರ್‌, ”ಬಿಬಿಎಂಪಿ ಚುನಾವಣೆಯನ್ನು ಯಾವ ತಿಂಗಳು ನಡೆಸಲಾಗುತ್ತದೆ ಎಂಬ ಬಗ್ಗೆ ಕೋರ್ಟ್‌ಗೆ ತಿಳಿಸಲು ಸರಕಾರ ತಯಾರಿ ಮಾಡಿಕೊಂಡಿದೆ. ಪಾಲಿಕೆ ಚುನಾವಣೆ ಶೀಘ್ರವೇ ಘೋಷಣೆಯಾಗಲಿದ್ದು, ಸಿದ್ಧರಾಗಿ,” ಎಂದರು.

”ಪಾಲಿಕೆ ಚುನಾವಣೆ ಸಂಬಂಧ ಸದ್ಯದಲ್ಲೇ ಪಕ್ಷದ ಪದಾಧಿಕಾರಿಗಳು ಹಾಗೂ ಪ್ರಮುಖರ ಸಭೆ ನಡೆಸಲಾಗುತ್ತಿದ್ದು, ಪ್ರತಿ ಬೂತ್‌ ಮಟ್ಟದಲ್ಲಿ ಸಿದ್ಧತೆ ಆಗಬೇಕು. ಯುವ ಕಾಂಗ್ರೆಸ್‌ ಕಾರ್ಯಕರ್ತರು ತಕ್ಷಣದಿಂದ ಕೆಲಸ ಆರಂಭಿಸಬೇಕು,” ಎಂದು ಸೂಚಿಸಿದರು.

”ರಾಜ್ಯದ ಇತರೆ ಸ್ಥಳೀಯ ಸಂಸ್ಥೆಗಳು, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೂ ಸಜ್ಜಾಗಬೇಕು. ಇನ್ನು 2 ತಿಂಗಳಲ್ಲಿ ಪಂಚಾಯಿತಿ ಚುನಾವಣೆ ಬರುವ ಸಾಧ್ಯತೆಯಿದೆ. ಈ ಕುರಿತು ಕೋರ್ಟ್‌ನಲ್ಲೂ ಅಫಿಡವಿಟ್‌ ಹಾಕಲಾಗುತ್ತಿದೆ,” ಎಂದು ಹೇಳಿದರು.

25ಕ್ಕೆ ಸುಪ್ರೀಂ ಕೋರ್ಟ್‌ ವಿಚಾರಣೆ
ರಾಜ್ಯದ ಪ್ರಮುಖ ಹಾಗೂ ಬೃಹತ್‌ ಪಾಲಿಕೆಗಳಲ್ಲಿ ಬಿಬಿಎಂಪಿ ಸೇರಿದೆ. ಕಳೆದ 5 ವರ್ಷಗಳಿಂದ ಬಿಬಿಎಂಪಿ ಚುನಾವಣೆ ನಡೆದಿಲ್ಲ. ಇದರಿಂದ ರಾಜಧಾನಿಯಲ್ಲಿ ಮೂಲಸೌಕರ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಫೆಬ್ರವರಿ 25ರಂದು ವಿಚಾರಣೆ ನಡೆಯಲಿದ್ದು, ಪಾಲಿಕೆ ಚುನಾವಣೆಗೆ ಕಾಂಗ್ರೆಸ್‌ ಮೊದಲ ಹೆಜ್ಜೆ ಇರಿಸಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಕೆ ಶಿವಕುಮಾರ್‌ ಅವರು ಕೊಟ್ಟಿರುವ ಹೇಳಿಕೆಯಿಂದ ಕಾಂಗ್ರೆಸ್‌ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಬಿಬಿಎಂಪಿ ಚುನಾವಣೆ ನಡೆಸುವುದು ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೂ ಬೇಕಾಗಿಲ್ಲ ಎಂದೇ ಹೇಳಲಾಗುತ್ತಿತ್ತು. ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಆಡಳಿತ ನಡೆಸಿರುವ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಬಿಬಿಎಂಪಿ ಚುನಾವಣೆಯನ್ನು ನಡೆಸಿಲ್ಲ. ಒಂದಿಲ್ಲೊಂದು ಕಾರಣ ನೀಡಿ ಚುನಾವಣೆಯನ್ನು ಮುಂದೂಡುತ್ತಲ್ಲೇ ಬಂದಿವೆ. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನಿರ್ಣಾಯಕ ತೀರ್ಪು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ, ಕಾಂಗ್ರೆಸ್‌ ಒಲ್ಲದ ಮನಸ್ಸಿನಿಂದಲೇ ಚುನಾವಣೆಗೆ ಸಿದ್ಧತೆ ಶುರು ಮಾಡಿದೆ.

ರಾಜ್ಯದಲ್ಲಿ ಬೆಲೆ ಏರಿಕೆ ಸರದಿ: ಬಜೆಟ್ ನಂತರ ನಂದಿನಿ ಹಾಲಿನ ದರ ಲೀಟರ್‌ಗೆ 5 ರೂ ಹೆಚ್ಚಳ!

Leave a Reply

Your email address will not be published. Required fields are marked *