BBMP
Loading ...

Bird flu

ಬಳ್ಳಾರಿ: ಬಿರುಬಿಸಿಲಿನಿಂದ ಕೋಳಿಗಳನ್ನು ರಕ್ಷಿಸುವ ಸವಾಲಿನ ಮಧ್ಯೆ ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಕಾಣಿಸಿಕೊಂಡ ಹಕ್ಕಿಜ್ವರ, ರಾಜ್ಯದ ಕುಕ್ಕುಟ ಉದ್ಯಮವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ನೆರೆಯ ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನೆಲೆ ಅಲ್ಲಿನ ಕುಕ್ಕುಟ ಉದ್ಯಮ ನೆಲಕಚ್ಚಿದೆ. ಕೋಳಿಗಳ ಮಾರಾಟ ಕೈಗೊಳ್ಳಲಾಗದೇ ಉದ್ಯಮಿಗಳು ಕಂಗಲಾಗಿದ್ದಾರೆ. ಆಂಧ್ರ ಮತ್ತು ತೆಲಂಗಾಣದ ಜತೆ ಗಡಿ ಹಂಚಿಕೊಂಡ ರಾಜ್ಯದ ಜಿಲ್ಲೆಗಳ ಕುಕ್ಕುಟ ಉದ್ಯಮದ ಮೇಲೂ ಹಕ್ಕಿಜ್ವರ ವದಂತಿ ವ್ಯತಿರಿಕ್ತ ಪರಿಣಾಮ ಬೀರಿದೆ. ಕೋಳಿ ಮಾರಾಟದಲ್ಲಿ ತೀವ್ರ ಹಿನ್ನಡೆ ಕಂಡುಬಂದಿದೆ. ಈ ಹಿಂದೆ ಹೋಲ್‌ಸೇಲ್‌ನಲ್ಲಿ ಬಾಯ್ಲರ್‌ ಕೋಳಿ ಪ್ರತಿ ಕೆ.ಜಿ.ಗೆ 90 ರೂ.ಗಳಂತೆ ಮಾರಾಟವಾಗುತ್ತಿತ್ತು. ಕೆಲ ದಿನಗಳಿಂದ ಈ ದರ 60-70ರೂ.ಗಳಿಗೆ ಕುಸಿದಿದೆ. ಪೌಲ್ಟ್ರಿ ಫಾರಂ ಮಾಲೀಕರು ನಷ್ಟದ ಭೀತಿ ಅನುಭವಿಸುತ್ತಿದ್ದಾರೆ.

ಮೊಟ್ಟೆ ಬೆಲೆಯೂ ಪಾತಾಳಕ್ಕೆ:
ಕೋಳಿ ಮಾಂಸದ ಜತೆಗೆ ಮೊಟ್ಟೆ ಮಾರಾಟದಲ್ಲೂ ತೀವ್ರ ಹಿನ್ನಡೆ ಕಂಡುಬಂದಿದೆ. 5 ರೂ.ಗಳಿಗೆ ಮಾರಾಟವಾಗುತ್ತಿದ್ದ ಒಂದು ಮೊಟ್ಟೆ, ಕಳೆದ ಒಂದು ವಾರದಿಂದ 3.90 ರೂ.ಗಳಿಗೆ ಇಳಿದಿದೆ. ಕೋಳಿಗಳ ನಿರ್ವಹಣೆ, ದುಬಾರಿ ಆಹಾರ ಖರೀದಿ ಹೊರೆಯ ಮಧ್ಯೆ ಮೊಟ್ಟೆ ಬೆಲೆ ಕುಸಿತ ಕೋಳಿ ಫಾರಂ ಮಾಲೀಕರಿಗೆ ನಷ್ಟದ ಬಿಸಿ ಮುಟ್ಟಿಸಿದೆ.

ಬಳ್ಳಾರಿ ಜಿಲ್ಲೆಯಲ್ಲಿ 15 ಕೋಳಿ ಫಾರಂಗಳಿದ್ದು, 30 ಲಕ್ಷಕ್ಕೂ ಹೆಚ್ಚು ಕೋಳಿಗಳ ಸಾಕಣೆ ನಡೆದಿದೆ. ಜಿಲ್ಲೆಯಲ್ಲಿ ಬಿರುಬಿಸಿಲು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ವೇಳೆ ಕೋಳಿಗಳು ಸಾವಿಗೀಡಾಗುವುದನ್ನು ತಪ್ಪಿಸಲು ಫಾರಂಗಳಲ್ಲಿ ತಂಪಿನ ವಾತಾವರಣ ಕಲ್ಪಿಸಲು ಉದ್ಯಮಿಗಳು ನಾನಾ ತಂತ್ರಗಳನ್ನು ಅನುಸರಿಸಬೇಕಿದೆ. ನೀರಿನ ಸಿಂಪರಣೆ ಮಾಡಲು ಸ್ಟ್ರಿಂಕ್ಲರ್‌ ವ್ಯವಸ್ಥೆ ಸೇರಿ ಇತರ ಸೌಲಭ್ಯಗಳನ್ನು ಒದಗಿಸಲು ಹೆಚ್ಚುವರಿ ಖರ್ಚಿನ ನಿಭಾಯಿಸಬೇಕಿದೆ. ಹೀಗಾಗಿ ಕುಕ್ಕುಟ ಉದ್ಯಮ ನಷ್ಟದ ಭೀತಿಯಲ್ಲಿ ಸಿಲುಕುವಂತಾಗಿದೆ.

ಜಿಲ್ಲೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿಲ್ಲ. ಆದರೂ ಹೋಲ್‌ಸೇಲ್‌ ಕೋಳಿ ಮೊಟ್ಟೆ ಮಾರಾಟ ಗಣನೀಯ ಕುಸಿದಿದೆ. ಮಾಲೀಕರು ನಷ್ಟದಲ್ಲಿದ್ದಾರೆ ಎಂದು ಬಳ್ಳಾರಿ ಕೊಳಿಫಾರಂ ಮಾಲೀಕ ದುರ್ಗಾಪ್ರಸಾದ್ ಹೇಳಿದ್ದಾರೆ.

ಮೊಟ್ಟೆ ಇಡುವ ಕೋಳಿಗಳ ನಿರ್ವಹಣೆಗೆ ಹೆಚ್ಚಿನ ಖರ್ಚು ತಗಲಿದ್ದು, ಲಾಭವಿಲ್ಲದೆ ಅನಿವಾರ್ಯವಾಗಿ ಉದ್ಯಮ ನಡೆಸುವಂತಾಗಿದೆ ಎಂದಿದ್ದಾರೆ ಶ್ರೀನಿವಾಸ ಜಿಲ್ಲಾಧ್ಯಕ್ಷರು, ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ, ಬಳ್ಳಾರಿ.

ಹಕ್ಕಿಜ್ವರ ನೆರೆ ರಾಜ್ಯಗಳಲ್ಲಿ ಇರುವುದರಿಂದ ಬಳ್ಳಾರಿಯಲ್ಲಿ ಎಚ್ಚರ ವಹಿಸಲಾಗಿದೆ ಎಂದಿದ್ದಾರೆ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕರು, ಡಾ ವಿನೋದ್ ಕುಮಾರ್.

ರಸ್ತೆಯಲ್ಲಿ ಕಸ ಎಸೆದ್ರೆ ನಿಮ್ಮ ಮನೆಗೆ ಬಂದು ದಂಡ ಹಾಕ್ತಾರೆ ಬಿಬಿಎಂಪಿ ಸಿಬ್ಬಂದಿ!

Leave a Reply

Your email address will not be published. Required fields are marked *