BBMP
Loading ...

BDA

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಪಿಆರ್‌ಆರ್‌-2 ಯೋಜನೆಗೆ ಹೊಂದಿಕೊಂಡಂತೆ ಆರು ಹೊಸ ಬಡಾವಣೆಗಳನ್ನು ನಿರ್ಮಿಸಲು ನಿರ್ಧರಿಸಿದೆ. ಇದಕ್ಕಾಗಿ ಈ ಭಾಗದ ನಾನಾ ಗ್ರಾಮಗಳಲ್ಲಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಿಡಿಎ ಸಿದ್ಧತೆ ನಡೆಸಿದೆ.

ಪಿಆರ್‌ಆರ್‌ (ಬೆಂಗಳೂರು ಬ್ಯುಸಿನೆಸ್‌ ಕಾರಿಡಾರ್‌) ಯೋಜನೆ ಎರಡು ಹಂತದಲ್ಲಿ ಅನುಷ್ಠಾನಗೊಳ್ಳಲಿದೆ. ಪಿಆರ್‌ಆರ್‌-1 ತುಮಕೂರು ಮತ್ತು ಹೊಸೂರು ರಸ್ತೆ ಸಂಪರ್ಕಿಸಲಿದೆ. ಇದರ ಮುಂದುವರಿದ ಭಾಗವಾಗಿ ಹೊಸೂರು ರಸ್ತೆ ಹಾಗೂ ಬೆಂಗಳೂರು-ಮೈಸೂರು ರಸ್ತೆಯನ್ನು ಪಿಆರ್‌ಆರ್‌-2 ಸಂಪರ್ಕಿಸಲಿದೆ. ಪಿಆರ್‌ಆರ್‌-2 ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ ಮಾರ್ಗವಾಗಿ ಸಾಗಲಿದೆ.

ಪಿಆರ್‌ಆರ್‌-2 ಯೋಜನೆಯಡಿ 100 ಮೀಟರ್‌ ಅಗಲದಲ್ಲಿ 30 ಕಿ.ಮೀ. ಉದ್ದದ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಜತೆಗೆ ಈ ಕಾರಿಡಾರ್‌ನ ಎರಡೂ ಬದಿಗಳಲ್ಲಿ ತಲಾ 24 ಮೀಟರ್‌ ಉದ್ದಕ್ಕೂ ವಾಣಿಜ್ಯ ನಿವೇಶನಗಳನ್ನು ರಚಿಸಲಾಗುತ್ತದೆ. ಈ ವಾಣಿಜ್ಯ ಪ್ರದೇಶವನ್ನು ಮಾರಾಟ ಮಾಡಿ ವ್ಯವಹಾರಕ್ಕೆ ಉತ್ತೇಜನ ನೀಡಲು ಉದ್ದೇಶಿಸಲಾಗಿದೆ.

ಪಿಆರ್‌ಆರ್‌-2 ಯೋಜನೆಗೆ ಹೊಂದಿಕೊಂಡಂತಿರುವ ಗ್ರಾಮಗಳಲ್ಲಿ ಹೊಸದಾಗಿ ರಚಿಸಲು ಉದ್ದೇಶಿಸಿರುವ ಬಡಾವಣೆಗೆ ಅಗತ್ಯವಿರುವ ಜಮೀನನ್ನು ಗುರುತಿಸಿ, ಭೂಸ್ವಾಧೀನಪಡಿಸಿಕೊಳ್ಳುವ ಕುರಿತು ಇನ್ನಷ್ಟೇ ಪ್ರಾಥಮಿಕ ಅಧಿಸೂಚನೆ ಹೊರಡಿಸಬೇಕಾಗಿದೆ. ಭೂಮಿ ನೀಡಿದ ರೈತರಿಗೆ ಪರಿಹಾರ ನೀಡಬೇಕಿದೆ. ಹೀಗಾಗಿ ಸದರಿ ಯೋಜನೆಗಾಗಿ ಅಗತ್ಯವಿರುವ ಜಮೀನನ್ನು ಅಭಿಯಂತರ ಅಧಿಕಾರಿಗಳೊಂದಿಗೆ ಸಮನ್ವಯ ಮಾಡಿಕೊಂಡು ಗುರುತಿಸಿ, ಪ್ರಾಥಮಿಕ ಅಧಿಸೂಚನೆ ಹೊರಡಿಸಲು ಬೇಕಾಗುವ ಅಗತ್ಯ ಮಾಹಿತಿಯನ್ನು ಕ್ರೋಢೀಕರಿಸುವ ಸಂಬಂಧ ಭೂಸ್ವಾಧೀನಾಧಿಕಾರಿಗಳ ನೇತೃತ್ವದಲ್ಲಿತಂಡಗಳನ್ನು ರಚಿಸಿ ಆದೇಶಿಸಲಾಗಿದೆ. ಹೊಸ ಬಡಾವಣೆ ರಚನೆ ಮಾಡುವ ಸಂಬಂಧ ಸ್ವಾಧೀನಪಡಿಸಿಕೊಳ್ಳಬಹುದಾದ ಜಮೀನನ್ನು ಗುರುತಿಸಿ, ಈ ಜಮೀನಿನ ಖಾತೆದಾರರು, ವಿಸ್ತೀರ್ಣದ ವಿವರ, ಜಮೀನಿನ ನಕ್ಷೆ, ಚಕ್ಕುಬಂದಿ ಮತ್ತು ಇತರೆ ವಿವರಗಳನ್ನು ಸಂಗ್ರಹಿಸಲು ಸೂಚಿಸಲಾಗಿದೆ.

”ಬಿಡಿಎ ಸೈಟುಗಳಿಗೆ ಭಾರೀ ಬೇಡಿಕೆ ಇದೆ. ನಾವು ಹೊಸದಾಗ 50 ಸಾವಿರ ಸೈಟುಗಳನ್ನು ಅಭಿವೃದ್ಧಿಗೊಳಿಸುವ ಗುರಿ ಹೊಂದಿದ್ದೇವೆ. ಯೋಜನೆಗೆ ಭೂಮಿ ನೀಡುವವರಿಗೆ 40 : 60ರ ಅನುಪಾತದಲ್ಲಿ ಪರಿಹಾರ ನೀಡಲಿದ್ದೇವೆ. ಬಿಡಿಎ ನಿಯಮದಂತೆ ಭೂಮಿ ನೀಡಿದವರಿಗೆ ಅದೇ ಬಡಾವಣೆಯಲ್ಲಿನಿವೇಶನ ನೀಡಲಾಗುತ್ತದೆ. ಬಿಡಿಎ ನಿವೇಶನ ಅಭಿವೃದ್ಧಿಗೊಳಿಸಿದ ಬಳಿಕ ನಿವೇಶನಗಳ ದರ ಕುರಿತು ತೀರ್ಮಾನ ಮಾಡಲಾಗುತ್ತದೆ,” ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯಾವ ಗ್ರಾಮಗಳಲ್ಲಿ ಬಡಾವಣೆಗಳಿಗೆ ಭೂಮಿ ?
ಬಿ.ಎಂ. ಕಾವಲ್‌, ಗುಳಕಮಲೆ, ಕಗ್ಗಲೀಪುರ, ಓ.ಬಿ. ಚೂಡನಹಳ್ಳಿ, ಅಗರ, ಉತ್ತರಿ, ದೇವಗೆರೆ, ಗುಡಿಮಾವು, ಕಂಬೀಪುರ, ಗಂಗಸಂದ್ರ ಮತ್ತಿತರ ಗ್ರಾಮಗಳು. “ಪಿಆರ್‌ಆರ್‌-2 ಯೋಜನೆಗೆ ಭೂಮಿ ನೀಡಿದ ರೈತರಿಗೆ ಪರಿಹಾರ ನೀಡುವ ಸಂಬಂಧ 6 ಹೊಸ ಬಡಾವಣೆಗಳನ್ನು ನಿರ್ಮಿಸಲಾಗುವುದು. ಇದಕ್ಕಾಗಿ ಸದ್ಯ ಸುಮಾರು ಮೂರು ಸಾವಿರ ಹೆಕ್ಟೇರ್‌ಗೂ ಹೆಚ್ಚು ವ್ಯಾಪ್ತಿಯ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಅಂದಾಜಿದೆ. ಈ ಭಾಗದ ಸರಕಾರಿ ಮತ್ತು ಖಾಸಗಿ ಭೂಮಿಗಳೆರಡನ್ನೂ ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲಾಗುವುದು. ಆದರೆ ಈ ಬಗ್ಗೆ ಇನ್ನೂ ಸರ್ವೆ ಕಾರ್ಯ ನಡೆಯಬೇಕಾಗಿದೆ. ಜತೆಗೆ ಬಿಡಿಎ ಪರಿಹಾರ ದರ ನಿಗದಿಪಡಿಸಬೇಕಾಗಿದೆ” ಎಂದು ಬಿಡಿಎ ಭೂ ಸ್ವಾಧೀನ ಉಪ ಆಯುಕ್ತ ಜಗದೀಶ್‌ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ದ್ರಾವಿಡ್ ಕಾರು ಅಪಘಾತ; ಗೂಡ್ಸ್ ಆಟೋ ಚಾಲಕನೊಂದಿಗೆ ವಾಗ್ವಾದ

Leave a Reply

Your email address will not be published. Required fields are marked *