ಧಾರ್ಮಿಕ ದೃಷ್ಟಿಯಿಂದ ಕಾರ್ತಿಕ ಮಾಸ ತುಂಬಾ ವಿಶೇಷವಾದ ಮಾಸವಾಗಿದೆ. ಕಾರ್ತಿಕ ಮಾಸ ನವೆಂಬರ್ 2ರಿಂದ ಶುರು. ಈ ಮಾಸ ಧಾರ್ಮಿಕ ಕಾರ್ಯಗಳಿಗೆ ತುಂಬಾನೇ ಶ್ರೇಷ್ಠ ಮಾಸವಾಗಿದೆ. ಕಾರ್ತಿಕ ಮಾಸದಲ್ಲಿ ಕಾರ್ತಿಕ ಸೋಮಾವಾರ ತುಂಬಾ ವಿಶೇಷವಾದ ದಿನವಾಗಿದೆ. ಈ ವರ್ಷ ಕಾರ್ತಿಕ ಮಾಸ ಡಿಸೆಂಬರ್ 1ಕ್ಕೆ ಮುಗಿಯಲಿದೆ. ಈ 30 ದಿನಗಳು ದೇವಾಲಯಗಳಲ್ಲಿ ದೀಪಗಳನ್ನು ಬೆಳಗಿಸಿ ವಿಶೇಷ ಪೂಜೆ ಸಲ್ಲಿಸಲಾಗುವುದು.
ಕಾರ್ತಿಕ ಮಾಸದಲ್ಲಿ ದೇವರನ್ನು ಪೂಜಿಸುವುದು ಮತ್ತು ದೀಪಗಳನ್ನು ಹಚ್ಚುವುದು ಪ್ರತಿದಿನದ ಪ್ರಮುಖ ಆಚರಣೆಗಳು. ಇಡೀ ಕಾರ್ತಿಕ ಮಾಸವು ಭಕ್ತಿ ಮತ್ತು ಪೂಜೆಯ ಮಾಸವಾಗಿರುತ್ತದೆ. ಅನೇಕ ಹಬ್ಬಗಳನ್ನು ಸಹ ಆಚರಿಸಲಾಗುತ್ತದೆ. ಹಿಂದೂ ಧಾರ್ಮಿಕ ಸಂಪ್ರದಾಯದಲ್ಲಿ ಈ ಹಬ್ಬಗಳಿಗೆ ವಿಶೇಷ ಸ್ಥಾನವಿದೆ. ಕಾರ್ತಿಕ ಮಾಸವು ಭಗವಾನ್ ಶಿವ ಮತ್ತು ವಿಷ್ಣು ದೇವರಿಗೆ ಅತ್ಯಂತ ಪ್ರಶಸ್ತವಾದ ಸಮಯವಾಗಿದ್ದು, ಈ ಮಾಸದಲ್ಲಿ ಪೂಜಿಸುವುದು ಭಕ್ತರಿಗೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಹೇಳಲಾಗುತ್ತದೆ.
ಕಾರ್ತಿಕ ಮಾಸದಲ್ಲಿ ದಾನ ಮಾಡುವುದು ಶ್ರೇಷ್ಠ ಕಾರ್ಯವಾಗಿದೆ. ಕಾರ್ತಿಕ ಮಾಸದಲ್ಲಿ ಬಡವರಿಗೆ ಅನ್ನವನ್ನು ದಾನ ಮಾಡಬೇಕು. ಹೀಗೆ ಮಾಡುವುದರಿಂದ ಜಾತಕದಲ್ಲಿನ ಚಂದ್ರನ ದೋಷ ನಿವಾರಣೆಯಾಗುತ್ತದೆ ಮತ್ತು ಚಂದ್ರ ಗ್ರಹವೂ ಶುಭ ಫಲವನ್ನು ನಿಮಗೆ ನೀಡಲು ಪ್ರಾರಂಭಿಸುತ್ತದೆ. ಅನ್ನದಾನವನ್ನು ಶ್ರೇಷ್ಠ ದಾನವೆಂದು ಪರಿಗಣಿಸಲಾಗುವುದರಿಂದ ಇದನ್ನು ಮಾಡಬೇಕು. ಒಂದು ವೇಳೆ ಬಡವರಿಗೆ ಅನ್ನದಾನ ಮಾಡಲು ಸಾಧ್ಯವಾಗದೇ ಇದ್ದರೆ ಹಸುಗಳಿಗೆ ಅನ್ನದಾನವನ್ನು ಮಾಡಬಹುದು.
ಕಾರ್ತಿಕ ಮಾಸದಲ್ಲಿ ಅನ್ನದಾನ ಮಾಡುವುದನ್ನು ಹೊರತುಪಡಿಸಿ, ದೀಪದಾನ ಮಾಡುವುದಕ್ಕೂ ಹೆಚ್ಚಿನ ಮಹತ್ವವಿದೆ. ಕಾರ್ತಿಕ ಮಾಸದ ಅವಧಿಯಲ್ಲಿ, ನೀವು ಯಾವುದೇ ಪುಣ್ಯ ನದಿಯಲ್ಲಿ, ಕೊಳದಲ್ಲಿ ಅಥವಾ ಇನ್ನಾವುದೇ ಪವಿತ್ರ ನೀರಿನ ಮೂಲದಲ್ಲಿ ಹೋಗಿ ತುಪ್ಪದ ದೀಪವನ್ನು ದಾನ ಮಾಡಬೇಕು ಎಂದು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ರೀತಿ ಮಾಡುವುದರಿಂದ ವ್ಯಕ್ತಿಯು ಪುಣ್ಯ ಫಲಗಳನ್ನು ಪಡೆದುಕೊಳ್ಳುತ್ತಾನೆ.


