ಸ್ಯಾಂಡಲ್ವುಡ್ನಲ್ಲಿ ‘ಮಠ‘, ‘ಎದ್ದೇಳು ಮಂಜುನಾಥ’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿ ಎಲ್ಲರ ಗಮನಸೆಳೆದಿದ್ದ ನಿರ್ದೇಶಕ ಗುರುಪ್ರಸಾದ್ ಅವರು ಸಾವನ್ನಪ್ಪಿದ್ದಾರೆ. ಕೆಲ ದಿನಗಳ ಹಿಂದೆ ಮಾದನಾಯಕನಹಳ್ಳಿಯಲ್ಲಿ ಇರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದು, ಭಾನುವಾರ (ನ.3) ಮೃತದೇಹ ಪತ್ತೆಯಾಗಿದೆ. ಅವರಿಗೆ 52 ವರ್ಷ ವಯಸ್ಸಾಗಿತ್ತು.
ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ
ಗುರುಪ್ರಸಾದ್ ಅವರು ಯಾವಾಗ ಆತ್ಮಹತ್ಯೆ ಮಾಡಿಕೊಂಡಿರಬಹುವುದು ಎಂಬ ಮಾಹಿತಿ ಸಿಕ್ಕಿಲ್ಲ. ಆದರೆ ಮೃತದೇಹವು ಕೊಳೆಯ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತದೇಹದ ಸ್ಥಿತಿಯನ್ನು ಗಮನಿಸಿದರೆ, 10 ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯ ಇದೆ. ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನು ತಿಳಿದು ಬಂದಿಲ್ಲ. ಆದರೆ, ಸಾಲಗಾರರ ಕಾಟಕ್ಕೆ ಹೆದಿರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಎರಡನೇ ಮದುವೆ ಆಗಿದ್ದ ಗುರುಪ್ರಸಾದ್
ಗುರುಪ್ರಸಾದ್ ಅವರ ಸಾಂಸಾರಿಕ ಜೀವನ ಅಷ್ಟೊಂದು ಉತ್ತಮವಾಗಿರಲಿಲ್ಲ. ಮೊದಲನೇ ಪತ್ನಿಗೆ ವಿಚ್ಛೇದನ ನೀಡಿದ್ದ ಗುರುಪ್ರಸಾದ್, ಈಚೆಗಷ್ಟೇ ಎರಡನೇ ಮದುವೆ ಆಗಿದ್ದರು. ಇದೀಗ ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ವರ್ಷದ ಆರಂಭದಲ್ಲಿ ಅವರ ನಿರ್ದೇಶನದ ‘ರಂಗನಾಯಕ’ ಚಿತ್ರ ತೆರೆಕಂಡಿತ್ತು. ಆದಾದ ಬಳಿಕ ಅವರು ಯಾವ ಸಿನಿಮಾವನ್ನು ಕೈಗೆತ್ತಿಕೊಂಡಿರಲಿಲ್ಲ.
ನಿರ್ದೇಶಕ ಗುರುಪ್ರಸಾದ್ ಬಗ್ಗೆ..
ಗುರುಪ್ರಸಾದ್ ಅವರ ಪೂರ್ಣ ಹೆಸರು ಗುರುಪ್ರಸಾದ್ ರಾಮಚಂದ್ರ ಶರ್ಮಾ. ‘ನಾನು ನಿರ್ದೇಶಕನಲ್ಲ, ಹತಾಶ ಪ್ರೇಕ್ಷಕ’ ಎಂದು ಹೇಳಿಕೊಳ್ಳುತ್ತಲೇ ಸಿನಿಮಾಗಳ ನಿರ್ದೇಶನಕ್ಕಿಳಿದಿದ್ದರು ಗುರುಪ್ರಸಾದ್. 2006ರಲ್ಲಿ ತೆರೆಕಂಡ ‘ಮಠ’ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ನಿರ್ದೇಶಕರಾಗಿ ಎಂಟ್ರಿ ನೀಡಿದ ಅವರು, ಆನಂತರ ‘ಎದ್ದೇಳು ಮಂಜುನಾಥ’ ಸಿನಿಮಾವನ್ನು ನಿರ್ದೇಶಿಸಿದರು. ಇವೆರಡೂ ಸಿನಿಮಾಗಳು ಗುರುಪ್ರಸಾದ್ಗೆ ಭಾರಿ ಜನಪ್ರಿಯತೆಯನ್ನು ತಂದುಕೊಟ್ಟವು. ‘ಎದ್ದೇಳು ಮಂಜುನಾಥ’ ಸಿನಿಮಾದ ಚಿತ್ರಕಥೆಗಾಗಿ ರಾಜ್ಯ ಪ್ರಶಸ್ತಿಯನ್ನು ಕೂಡ ಗುರುಪ್ರಸಾದ್ ಪಡೆದುಕೊಂಡಿದ್ದರು. ಇವೆರಡೂ ಸಿನಿಮಾಗಳಲ್ಲಿ ಹೀರೋ ಆಗಿ ಜಗ್ಗೇಶ್ ನಟಿಸಿದ್ದರು.
ಸಾಲು ಸಾಲು ಸೋಲು..
ಗುರುಪ್ರಸಾದ್ ಅವರ 18 ವರ್ಷಗಳ ವೃತ್ತಿ ಬದುಕಿನಲ್ಲಿ ಅವರು ನಿರ್ದೇಶನ ಮಾಡಿರುವುದು ಕೇವಲ 5 ಸಿನಿಮಾಗಳನ್ನು ಮಾತ್ರ. 2006ರಲ್ಲಿ ‘ಮಠ’, 2009ರಲ್ಲಿ ‘ಎದ್ದೇಳು ಮಂಜುನಾಥ’, 2013ರಲ್ಲಿ ‘ಡೈರೆಕ್ಟರ್ ಸ್ಪೆಷಲ್’, 2017ರಲ್ಲಿ ‘ಎರಡನೇ ಸಲ’ ಮತ್ತು 2024ರಲ್ಲಿ ‘ರಂಗನಾಯಕ’ ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದ್ದರು. ಅವರ ಕಳೆದ ಮೂರು ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಸೋಲು ಕಂಡಿದ್ದವು. ಅದರಲ್ಲೂ ಜಗ್ಗೇಶ್ ಅವರ ಜೊತೆಗೆ ಮೂರನೇ ಬಾರಿಗೆ ‘ರಂಗನಾಯಕ’ ಸಿನಿಮಾವನ್ನು ಗುರುಪ್ರಸಾದ್ ಮಾಡಿದ್ದರು. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಹೀನಾಯ ಸೋಲನ್ನು ಅನುಭವಿಸಿತು. ಅಲ್ಲದೆ, ಸಿನಿಮಾದ ಕಂಟೆಂಟ್ ಬಗ್ಗೆ ಭಾರೀ ಆಕ್ಷೇಪ ವ್ಯಕ್ತವಾಗಿತ್ತು.
ನಟನೆ ಮತ್ತು ರಿಯಾಲಿಟಿ ಶೋ
ಬರೀ ನಿರ್ದೇಶನ ಮಾತ್ರವಲ್ಲದೇ, ನಟನೆಯಲ್ಲೂ ಅವರು ಸಕ್ರಿಯರಾಗಿದ್ದರು. ‘ಮೈಲಾರಿ’, ‘ಹುಡುಗರು’, ‘ಕುಷ್ಕ’, ‘ಮಠ’, ‘ಬಾಡಿ ಗಾಡ್’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 2ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿದ್ದರು. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಭರ್ಜರಿ ಕಾಮಿಡಿ, ಪುಟಾಣಿ ಪಂಟ್ರು ಸೀಸನ್ 2 ಮುಂತಾದ ರಿಯಾಲಟಿ ಶೋಗಳಲ್ಲಿ ತೀರ್ಪುಗಾರರಾಗಿದ್ದರು ಗುರುಪ್ರಸಾದ್.
ಹಾಸನಾಂಬೆ ದರ್ಶನಕ್ಕೆ ಇದುವರೆಗೆ 16 ಲಕ್ಷ ಭಕ್ತರ ಆಗಮನ: ಒಂಭತ್ತು ದಿನದಲ್ಲಿ 8 ಕೋಟಿ ರೂ ಆದಾಯ


