BBMP
Loading ...

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅಧಿಕ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು ಹಾಗೂ ಪರಿಷ್ಕರಣೆ ಪ್ರಕರಣಗಳಲ್ಲಿ ವ್ಯತ್ಯಾಸದ ತೆರಿಗೆ ಪಾವತಿಸದ ವಾಣಿಜ್ಯ ಕಟ್ಟಡಗಳಿಗೆ ಬೀಗಮುದ್ರೆ ಹಾಕಿ, ಸಂಬಂಧಪಟ್ಟ ಮಾಲೀಕರಿಗೆ ಬಿಸಿ ಮುಟ್ಟಿಸಲಾಗುತ್ತಿದೆ.

ನಗರದ 8 ವಲಯಗಳಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿರುವ ಕಂದಾಯ ವಿಭಾಗದ ಅಧಿಕಾರಿಗಳು, ಕಳೆದ 24 ತಾಸಿನಲ್ಲಿ 115 ವಸತಿಯೇತರ ಕಟ್ಟಡಗಳಿಗೆ ಬೀಗ ಹಾಕಿದ್ದಾರೆ. ಒಂದು ಬಾರಿ ಪರಿಹಾರ ಯೋಜನೆಯಡಿ ಸುಸ್ತಿದಾರರಿಗೆ ವಿಧಿಸಿದ್ದ ಬಡ್ಡಿ ಮತ್ತು ದಂಡ ಮನ್ನಾ ಮಾಡಲಾಗಿದೆ. ಆದರೂ, ಇದರ ಲಾಭ ಪಡೆಯಲು ಒಲವು ತೋರುತ್ತಿಲ್ಲ. ಸುಸ್ತಿದಾರರು ನವೆಂಬರ್‌ 31ರೊಳಗೆ ಬಾಕಿ ಆಸ್ತಿ ತೆರಿಗೆ ಪಾವತಿಸಬೇಕು. ಇಲ್ಲವಾದಲ್ಲಿ ಡಿಸೆಂಬರ್ 1ರಿಂದ ಬಾಕಿ ಆಸ್ತಿ ತೆರಿಗೆಯು ದ್ವಿಗುಣಗೊಳ್ಳಲಿದೆ.

ನಕಲಿ ನಕ್ಷೆ ತಯಾರಿಸಿಕೊಂಡು ಕಟ್ಟಡ ನಿರ್ಮಾಣ: ಎಫ್‌ಐಆರ್‌ ದಾಖಲು
ರಾಜರಾಜೇಶ್ವರಿನಗರ ವಲಯದ ಮಲ್ಲತ್ತಹಳ್ಳಿ ವ್ಯಾಪ್ತಿಯಲ್ಲಿ ಬಿಬಿಎಂಪಿ ಮಂಜೂರು ಮಾಡಿದ್ದ ನಕ್ಷೆಗೆ ವ್ಯತಿರಿಕ್ತವಾಗಿ ನಕಲಿ ನಕ್ಷೆ ಸಿದ್ಧಪಡಿಸಿಕೊಂಡು ಕಟ್ಟಡ ನಿರ್ಮಿಸುತ್ತಿದ್ದವರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ಮಲ್ಲತ್ತಹಳ್ಳಿ ಗ್ರಾಮದ ಸರ್ವೆ ನಂ. 6 ಮತ್ತು 7ರ ಮಾಲೀಕರಾದ ಜಿ ಲಕ್ಷ್ಮೇಪ್ರಸಾದ್‌, ಜಿಪಿಎ ಹೋಲ್ಡರ್‌ಗಳಾದ ಲ್ಯಾಕ್ವೆನ್‌ ಡೆವಲಪರ್ಸ್‌ ಪಾಲುದಾರರಾದ ಡಿ ಹರ್ದೀಪ್‌ ಮತ್ತು ಎ ವಿಜಯ ಕುಮಾರ್‌ ಅವರಿಗೆ 2023ರ ನವೆಂಬರ್‌ 3ರಂದು ನಕ್ಷೆ ಮಂಜೂರಾತಿ ನೀಡಲಾಗಿತ್ತು.

ತಳಮಹಡಿ ಸೇರಿ 4 ಅಂತಸ್ತು ಮತ್ತು ಟೆರೇಸ್‌ ಮಹಡಿ ನಿರ್ಮಾಣಕ್ಕೆ (ನಿರ್ಮಿತಿ ಪ್ರದೇಶ 1388.69 ಚ.ಮೀ.) ಅನುಮತಿ ನೀಡಲಾಗಿತ್ತು. ಆದರೆ, ಮಂಜೂರಾತಿ ನಕ್ಷೆಯಂತೆ ಕಟ್ಟಡ ನಿರ್ಮಿಸದೆ, ನಕಲಿ ನಕ್ಷೆ ತಯಾರಿಸಿಕೊಂಡು ನಗರ ಯೋಜನೆ ವಿಭಾಗದ ಸಹಾಯಕ ನಿರ್ದೇಶಕರ ಹೆಸರು ತಾಳೆಯಾಗದಂತೆ ಸ್ವ-ಇಚ್ಛಾನುಸಾರ ಕಟ್ಟಡ ನಿರ್ಮಿಸಿರುವುದು ಪರಿಶೀಲನೆ ವೇಳೆ ಕಂಡು ಬಂದಿದೆ.

ನಕಲಿ ನಕ್ಷೆ ಅನುಸಾರ 6 ಅಂತಸ್ತುಗಳನ್ನು ನಿರ್ಮಿಸಿದ್ದು, ಪ್ರತಿ ಮಹಡಿಗೆ 4 ಮನೆಗಳಂತೆ ಒಟ್ಟು 20 ಫ್ಲ್ಯಾಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಿಸುತ್ತಿರುವುದು ಪಾಲಿಕೆ ಬೈಲಾಗೆ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಉಲ್ಲಂಘಿತ ಭಾಗಗಳನ್ನು ತೆರವುಗೊಳಿಸುವಂತೆ ನೋಟಿಸ್‌ ನೀಡಲಾಗಿದೆ. ಅಲ್ಲದೆ, ನಕಲಿ ನಕ್ಷೆ ತಯಾರಿಸಿ ಕಟ್ಟಡ ನಿರ್ಮಿಸುತ್ತಿದ್ದ ಮಾಲೀಕ ಜಿ ಲಕ್ಷ್ಮೇಪ್ರಸಾದ್‌, ಲ್ಯಾಕ್ವೆನ್‌ ಡೆವಲಪರ್ಸ್ನ ಡಿ ಹರ್ದೀಪ್‌, ಎ ವಿಜಯಕುಮಾರ್‌ ಹಾಗೂ ಆರ್ಕಿಟೆಕ್ಟ್ ಪಿ ವಿನೋದ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ: 69 ಜನರ ಪಟ್ಟಿ ಇಲ್ಲಿದೆ

Leave a Reply

Your email address will not be published. Required fields are marked *