BBMP
Loading ...

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳು ಹಾಗೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ತೆರವಿಗೆ ಅಧಿಕಾರಿಗಳು ಮುಂದಾಗಿದ್ದು, ಶುಕ್ರವಾರ ಬಾಬುಸಾಪಾಳ್ಯದಲ್ಲಿನ ಎರಡು ಹಾಗೂ ಪಶ್ಚಿಮ ವಲಯದಲ್ಲಿ ಎರಡು ಕಟ್ಟಡಗಳನ್ನು ತೆರವುಗೊಳಿಸುವ ಮೂಲಕ ಕಾರ್ಯವನ್ನು ಆರಂಭಿಸಿದ್ದಾರೆ.

ಕಮಲಾನಗರದ ಕಟ್ಟಡ ಸಂಪೂರ್ಣ ತೆರವು: ಪಶ್ಚಿಮ ವಲಯದ ಮಹಾಲಕ್ಷ್ಮೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಮಲಾನಗರದಲ್ಲಿ ಕಟ್ಟಡದ ತಳಪಾಯದ ಗೋಡೆ ಶೇ. 20 ರಷ್ಟು ಕುಸಿದಿದ್ದು, ಶುಕ್ರವಾರ ತೆರವು ಕಾರ್ಯವನ್ನು ನಡೆಸಲಾಗಿದೆ. ಕಮಲಾನಗರ 3ನೇ ಮುಖ್ಯರಸ್ತೆಯ ಬಳಿಯ ನೀರುಗಾಲುವೆಗೆ ಹೊಂದಿಕೊಂಡಂತಿರುವ 3 ಅಂತಸ್ತಿನ ಮನೆಯನ್ನು, ಸುಮಾರು 20 – 25 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು.

ತಳಭಾಗದಲ್ಲಿ ದ್ವಿತೀಯ ನೀರು ಗಾಲುವೆಯ ಮೂಲಕ ಬರುವ ನೀರು ಮನೆಯ ತಳಪಾಯಕ್ಕೆ ಹೋಗಿರುವ ಕಾರಣ, ತಳಪಾಯದ ನೀರಿನ ಸಂಪ್ ಹಾಗೂ ಶೇ. 20 ರಷ್ಟು ತಳಪಾಯದ ಗೋಡೆ ಕುಸಿದಿದೆ. ಈ ಸಂಬಂಧ ಪಾಲಿಕೆ ಆಯುಕ್ತೆ ಅರ್ಚನಾ ಭೇಟಿ ನೀಡಿ ಪರಿಶೀಲನೆ ನಡೆಸಿ ತೆರವುಗೊಳಿಸಲು ಸೂಚನೆ ನೀಡಿದ್ದರು.

ಸುರಕ್ಷತೆಯ ದೃಷ್ಟಿಯಿಂದ ಎದುರು ಮನೆಯವರನ್ನು ಕೂಡಾ ಖಾಲಿ ಮಾಡಿಸಲಾಗಿತ್ತು. ಮನೆಗೆ ಸಂಪರ್ಕವಿದ್ದ ವಿದ್ಯುತ್ ಅನ್ನು ಕೂಡಾ ಕಡಿತಗೊಳಿಸಲಾಗಿತ್ತು. ಪಾಲಿಕೆ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ನಿಂತು ಕಟ್ಟಡವು ವಾಸಕ್ಕೆ ಯೋಗ್ಯವಾಗಿಲ್ಲದ ಕಾರಣ ಕಟ್ಟಡವನ್ನು ನೆಲಸಮ ಮಾಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, “ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಸೂಚನೆ ಮೇರೆಗೆ ಸಮೀಕ್ಷೆ ಆರಂಭಿಸಲಾಗಿದೆ. ನಿರ್ಮಾಣ ಹಂತದ ಎಲ್ಲ ಅನಧಿಕೃತ ಕಟ್ಟಡಗಳನ್ನು ಸಮೀಕ್ಷೆ ಮಾಡಿ, ನೋಟೀಸ್ ನೀಡುವ ಮೂಲಕ ಕೂಡಲೇ ನಿಲ್ಲಿಸಲಾಗುತ್ತಿದೆ. ಕಾನೂನು ಬಾಹಿರವಾಗಿ ಕಟ್ಟಡಗಳನ್ನು ಕಟ್ಟುತ್ತಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು 8ತಿಳಿಸಿದ್ದಾರೆ.

ಇ-ಖಾತಾ ಪಡೆಯಲು ಎನ್ ಕಂಬರನ್ಸ್ ಸರ್ಟಿಫಿಕೇಟ್ ಅಗತ್ಯವಿಲ್ಲ: ಬಿಬಿಎಂಪಿ

Leave a Reply

Your email address will not be published. Required fields are marked *