ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಯಲ್ಲಿ 300 ರೂಪಾಯಿ ಲಂಚ ಪಡೆದ ಆರೋಪದಡಿ ಮಹಿಳಾ ಟೈಪಿಸ್ಟ್ ಕಾಂತಿ ಎಂಬುವರನ್ನು ಸೇವೆಯಿಂದ ವಜಾಗೊಳಿಸಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಸೇವೆಯಿಂದ ವಜಾಗೊಳಿಸಿದ್ದ ಮಹಿಳೆಯನ್ನು ಕಡ್ಡಾಯ ನಿವೃತ್ತಿಗೊಳಿಸುವಂತೆ ಕೆಎಟಿ ನೀಡಿದ್ದ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ್ ಮತ್ತು ಸಿ.ಎಂ. ಪೂಣಚ್ಚ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ನೀಡಿದ್ದ ಆದೇಶ ರದ್ದುಪಡಿಸಿದ್ದು, ಆಕೆಯನ್ನು ಸೇವೆಯಿಂದ ವಜಾಗೊಳಿಸುವಂತೆ ಕೋರಿ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದೆ.
ಗಂಭೀರ ಪ್ರಕರಣ
ಪ್ರಕರಣದಲ್ಲಿಆರೋಪಿ ಮಹಿಳೆ ಲಂಚಕ್ಕೆ ಬೇಡಿಕೆ ಇಡುವುದು ಮತ್ತು ಪಡೆಯುವುದು ಗಂಭೀರ ಸಾಮಾಜಿಕ ನೈತಿಕತೆಯ ವಿಷಯವಾಗಿದ್ದು, ಅಂತಹ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಆದರೆ, ಇಲಾಖಾ ವಿಚಾರಣೆಯಲ್ಲಿಲಂಚ ಪಡೆದುಕೊಂಡಿರುವ ಅಂಶ ಗೊತ್ತಾಗಿದ್ದರೂ, ಅದನ್ನು ಪರಿಗಣಿಸದೆ ಶಿಕ್ಷೆ ಮಾರ್ಪಾಡು ಮಾಡಿರುವುದು ಸರಿಯಲ್ಲ,” ಎಂದು ನ್ಯಾಯಾಲಯ ಹೇಳಿದೆ
ಅಲ್ಲದೆ, ಶಿಸ್ತು ಪ್ರಾಧಿಕಾರ ಅಥವಾ ಮೇಲ್ಮನವಿ ಪ್ರಾಧಿಕಾರವು ವಿಧಿಸುವ ಶಿಕ್ಷೆಯು ನ್ಯಾಯಾಲಯದ ಆತ್ಮ ಸಾಕ್ಷಿಯನ್ನು ಆಘಾತಗೊಳಿಸುತ್ತದೆ ಎಂಬ ಅಂಶ ಗೊತ್ತಿದ್ದಲ್ಲಿ ಮಾತ್ರ ಶಿಕ್ಷೆಯ ಪ್ರಮಾಣ ಬದಲಾವಣೆ ಮಾಡಬಹುದೆಂದು ಸುಪ್ರೀಂಕೊರ್ಟ್ ಪ್ರಕರಣವೊಂದರಲ್ಲಿಹೇಳಿದೆ. ಆದರೆ, ಈ ಪ್ರಕರಣದಲ್ಲಿಲಂಚ ಸ್ವೀಕರಿಸಿದವರನ್ನು ವಜಾ ಮಾಡಿರುವ ಶಿಕ್ಷೆ ಅಸಮಂಜಸವಾಗಿದೆ ಎಂಬುದಕ್ಕೆ ನ್ಯಾಯಮಂಡಳಿ ಸೂಕ್ತ ಕಾರಣ ನೀಡಿಲ್ಲ. ಆದರೂ, ಅಪರಾಧಿಯನ್ನು ವಜಾಗೊಳಿಸಿರುವ ಆದೇಶ ಮಾರ್ಪಡಿಸಿ ಕಡ್ಡಾಯ ನಿವೃತ್ತಿ ಮಾಡಲು ಆದೇಶಿಸಿದ್ದು, ಈ ರೀತಿಯಲ್ಲಿಆದೇಶ ನೀಡುವುದಕ್ಕೆ ಅವಕಾಶವಿಲ್ಲ. ಆದ್ದರಿಂದ ಕೆಎಟಿ ರದ್ದುಗೊಳಿಸಲಾಗುತ್ತಿದೆ ‘ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿದೆ.
ಕಾನೂನುಬಾಹಿರವಾಗಿ ಲಂಚ ಸ್ವೀಕರಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಜಾ ಮಾಡಿ ಆದೇಶಿಸಲಾಗಿದೆ. ಆದರೆ, ಕೆಎಟಿ ಶಿಕ್ಷೆ ಬದಲಾಯಿಸಿರುವುದು ಸರಿಯಾದ ಕ್ರಮವಲ್ಲಎಂದು ಆದೇಶಿಸಿದೆ. ಕಾಂತಿ ವಿಚಾರಣೆ ಸಂದರ್ಭದಲ್ಲಿ ಕಾನೂನುಬಾಹಿರವಾಗಿ ಲಂಚ ಸ್ವೀಕರಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಅಲ್ಲದೆ, ಅದಕ್ಕಾಗಿ ಕ್ಷಮೆ ಕೋರಿದ್ದಾರೆಂದು ತನಿಖಾ ವರದಿಯಲ್ಲಿಉಲ್ಲೇಖಿಸಿದ್ದಾರೆ,” ಎಂದು ಸರ್ಕಾರಿ ವಕೀಲರು ವಿವರಿಸಿದ್ದಾರೆ.
ಪ್ರಕರಣದ ಹಿನ್ನೆಲೆ ಏನು?
ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಕಾಂತಿ, ದೂರುದಾರ ಗಣೇಶ್ಶೆಟ್ಟಿಯಿಂದ 300 ರೂ.ಲಂಚ ಸ್ವೀಕರಿಸಿದ್ದ ಆರೋಪ ಹೊತ್ತಿದ್ದರು. ಈ ಸಂಬಂಧ ಇಲಾಖೆ ವಿಚಾರಣೆ ನಂತರ ಕಾಂತಿ ಕರ್ತವ್ಯ ನಿಷ್ಠೆ ಕಾಪಾಡಿಕೊಳ್ಳಲು ವಿಫಲರಾಗಿದ್ದಾರೆ ಮತ್ತು ಕರ್ನಾಟಕ ನಾಗರಿಕ ಸೇವಾ (ನಡವಳಿಕೆ) ನಿಯಮ- 1966ರ ನಿಯಮ 3(1) (1) ರಿಂದ (3) ರವರೆಗೆ ಮತ್ತು ನಿಯಮ 16ರಡಿಯಲ್ಲಿದುರ್ನಡತೆ ತೋರಿದ್ದಾರೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದ್ದರಿಂದ ಕಾಂತಿ ಅವರನ್ನು 2014ರ ಜುಲೈ 24ರಂದು ಸೇವೆಯಿಂದ ವಜಾಗೊಳಿಸಲಾಗಿತ್ತು. ಅದನ್ನು ಪ್ರಶ್ನಿಸಿ ಕಾಂತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಕೆಎಟಿ, ಮಹಿಳೆ 11 ವರ್ಷ 5 ತಿಂಗಳು ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿ ವಜಾ ಆದೇಶ ರದ್ದುಪಡಿಸಿ, ಕಡ್ಡಾಯ ನಿವೃತ್ತಿ ಶಿಕ್ಷೆ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು
.


