BBMP
Loading ...

Muniratna new

ಬೆಂಗಳೂರು: ಓರ್ವ ಗುತ್ತಿಗೆದಾರ ಮತ್ತು ಪಾಲಿಕೆಯ ಮಾಜಿ ಸದಸ್ಯರೊಬ್ಬರಿಗೆ ಜಾತಿ ನಿಂದನೆ, ಹಣ ಸುಲಿಗೆ, ಜೀವ ಬೆದರಿಕೆ ಹಾಗೂ ವಂಚನೆ ನಡೆಸಿದ ಆರೋಪದಡಿ ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಬೆಂಗಳೂರು ನಗರ ಪೊಲೀಸರು ಕೋಲಾರದಲ್ಲಿ ಶನಿವಾರ ಬಂಧಿಸಿದ್ದಾರೆ.

ಗುತ್ತಿಗೆದಾರ ಚಲುವರಾಜು ಮತ್ತು ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯಕರ್‌ ಅವರು ವೈಯಾಲಿಕಾವಲ್‌ ಪೊಲೀಸ್‌ ಠಾಣೆಯಲ್ಲಿ ಶಾಸಕ ಮುನಿರತ್ನ ವಿರುದ್ಧ ಪ್ರತ್ಯೇಕ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದರು. ತಮ್ಮ ವಿರುದ್ಧ ಪ್ರಕರಣ ದಾಖಲಾಗಿರುವ ಮಾಹಿತಿ ತಿಳಿಯುತ್ತಿದ್ದಂತೆ ಎಚ್ಚೆತ್ತ ಮುನಿರತ್ನ ಶನಿವಾರ ಮಧ್ಯಾಹ್ನವೇ ನಗರ ತೊರೆದು ಕೋಲಾರ ಮಾರ್ಗವಾಗಿ ಆಂಧ್ರಪ್ರದೇಶದ ಚಿತ್ತೂರು ಕಡೆ ಪ್ರಯಾಣ ಬೆಳೆಸಿದ್ದರು. ಅಷ್ಟರಲ್ಲಿ ಮೊಬೈಲ್‌ ಲೊಕೇಶನ್‌ ಆಧರಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಕೋಲಾರದ ನಂಗಲಿ ಬಳಿ ಶಾಸಕರನ್ನು ವಶಕ್ಕೆ ಪಡೆದುಕೊಂಡು ಬೆಂಗಳೂರಿಗೆ ಕರೆತಂದಿದ್ದಾರೆ.

ಜೀವ ಬೆದರಿಕೆ, ಹಣ ಸುಲಿಗೆ ಪ್ರಕರಣದಲ್ಲಿ ಶಾಸಕರ ಗನ್‌ಮ್ಯಾನ್‌ ವಿಜಯಕುಮಾರ್‌, ಶಾಸಕರ ಕಾರ್ಯದರ್ಶಿ ಅಭಿಷೇಕ್‌ ಹಾಗೂ ವಸಂತ್‌ ಕುಮಾರ್‌ ಅವರನ್ನು ಕೂಡ ಶನಿವಾರ ಸಂಜೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗಿದೆ.

ಬಿಬಿಎಂಪಿಯ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕ್ಷೇತ್ರದ ಶಾಸಕ ಮುನಿರತ್ನ ಜತೆ ಭಿನ್ನಾಭಿಪ್ರಾಯ ಇತ್ತು. ಈ ಮಧ್ಯೆ ಶಾಸಕರು ತನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಸ್ನೇಹಿತರು ಹಾಗೂ ಪರಿಚಯಸ್ಥರು ಮಾಹಿತಿ ನೀಡಿದ್ದು, ನಾನು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಕೆಲವು ದಿನಗಳ ಹಿಂದೆ ಘನತ್ಯಾಜ್ಯ ಗುತ್ತಿಗೆದಾರ ಚಲುವರಾಜ್‌ ನನ್ನ ಬಳಿ ಬಂದು ಶಾಸಕ ಮುನಿರತ್ನ ಲಕ್ಷಾಂತರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದಿದ್ದರು. ಆಗ ಯಾವ ಶಾಸಕರಿಗೂ ಲಂಚ ಕೊಡುವ ಅಗತ್ಯವಿಲ್ಲ ಎಂದು ಹೇಳಿ, ನನ್ನ ವಾರ್ಡ್‌ನ ಸ್ವತ್ಛತೆ ಕಾರ್ಯ ಸರಿಯಾಗಿ ಮಾಡುವಂತೆ ಹೇಳಿದ್ದೆ.

ಈ ವಿಚಾರ ತಿಳಿದ ಶಾಸಕರು ಮೇ 18ರಂದು ಚಲುವರಾಜು ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಆ ದಲಿತನ ಮಾತು ಕೇಳಿ ನನಗೆ ಲಂಚ ಕೊಡುವುದಿಲ್ಲವೇ ಎಂದು ಹಲ್ಲೆ ಮಾಡಿದ್ದಾರೆ. ಬಳಿಕ ಇಷ್ಟು ದಿನಗಳ ಬಾಕಿ ಸೇರಿ ಒಟ್ಟಿಗೆ ಲಕ್ಷಾಂತರ ರೂ. ನೀಡಬೇಕೆಂದು ಕೇಳಿದ್ದರು. ಅಲ್ಲದೆ ಕೀಳು, ಅವಾಚ್ಯ ಪದಗಳಿಂದ ನಿಂದಿಸಿದ್ದರು. ತಾನು 5 ವರ್ಷ ಶಾಸಕ, ತನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಧಮಕಿ ಹಾಕಿದ್ದಾರೆ.

ಈ ವಿಚಾರವನ್ನು ಚಲುವರಾಜು ಆಡಿಯೋ ರೆಕಾರ್ಡ್‌ ಮಾಡಿಕೊಂಡು ನನಗೆ ಕೇಳಿಸಿದ್ದಾರೆ. ಶಾಸಕ ಮುನಿರತ್ನ ನನ್ನ ವೈಯಕ್ತಿಕ ಜಾತಿ ಮತ್ತು ಕುಟುಂಬ ನಿಂದನೆ ಮಾಡಿದ್ದಾರೆ. ದಲಿತ ಜನಾಂಗಕ್ಕೂ ಒಕ್ಕಲಿಗ ಜನಾಂಗಕ್ಕೂ ವೈಷಮ್ಯ ತಂದಿಟ್ಟು ಜನಾಂಗಿಯ ಘರ್ಷಣೆಗೆ ಪ್ರಚೋದನೆ ಉಂಟು ಮಾಡುವ ರೀತಿ ಮಾತನಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ವೇಲುನಾಯಕರ್‌ ದೂರು ನೀಡಿದ್ದಾರೆ. ಈ ಸಂಬಂಧ ಶಾಸಕ ಮುನಿರತ್ನ ವಿರುದ್ಧ ಜಾತಿ ನಿಂದನೆ ಹಾಗೂ ಇತರೆ ಆರೋಪಗಳಡಿ ಎಫ್‌ಐಆರ್‌ ದಾಖಲಾಗಿದೆ.

ಪ್ರಾಣ ಬೆದರಿಕೆ, ಹಣ ಸುಲಿಗೆ
ತಿಗಳರಪಾಳ್ಯದಲ್ಲಿ ಮೆ| ಗಂಗಾ ಎಂಟರ್‌ಪ್ರೈಸಸ್‌ ಎಂಬ ಹೆಸರಿನಲ್ಲಿ ಗುತ್ತಿಗೆದಾರರಾಗಿ ಪರವಾನಗಿ ಪಡೆದುಕೊಂಡಿರುವ ಚಲುವರಾಜು ನೀಡಿರುವ ದೂರಿನಲ್ಲಿ, “ನಾನು ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿ ಸಂಬಂಧ ಲಕ್ಷ್ಮೀದೇವಿನಗರದ ಡಿ ದೇವರಾಜು ಅರಸು ಟ್ರಕ್‌ ಟರ್ಮಿನಲ್‌ ಪ್ರದೇಶದಲ್ಲಿ ಘನತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಮಾಡುತ್ತಿದ್ದೇನೆ. 2021ರ ಸೆಪ್ಟಂಬರ್‌ನಲ್ಲಿ ಶಾಸಕರ ಗನ್‌ಮ್ಯಾನ್‌ ವಿಜಯಕುಮಾರ್‌ ಕರೆ ಮಾಡಿ ಶಾಸಕರನ್ನು ಭೇಟಿಯಾಗುವಂತೆ ಸೂಚಿಸಿದ್ದ. ಮರು ದಿನ ವೈಯಾಲಿಕಾವಲ್‌ನಲ್ಲಿರುವ ಶಾಸಕರ ಕಚೇರಿಗೆ ತೆರಳಿದ್ದು, ಆಗ ಶಾಸಕ ಮುನಿರತ್ನ, 10 ಕಸದ ಆಟೋಗಳನ್ನು ಕೊಡಿಸುತ್ತೇನೆ. ಅದಕ್ಕಾಗಿ 20 ಲಕ್ಷ ರೂ. ಕೊಡಬೇಕೆಂದು ಹೇಳಿದ್ದರು. ಅದರಂತೆ ಒಂದೆರಡು ದಿನಗಳಲ್ಲಿ ಆ ಹಣವನ್ನು ತಂದಿದ್ದು, ಶಾಸಕರ ಸೂಚನೆ ಮೇರೆಗೆ ಹಣವನ್ನು ಗನ್‌ಮ್ಯಾನ್‌ ವಿಜಯಕುಮಾರ್‌ಗೆ ಕೊಟ್ಟಿದ್ದೇನೆ. 2 ದಿನಗಳ ಬಳಿಕ ಆಟೋ ಕೊಡಿಸುವ ವಿಚಾರವನ್ನು ಶಾಸಕರ ಬಳಿ ಪ್ರಶ್ನಿಸಿದಾಗ 10 ಆಟೋಗಳನ್ನು ನೀಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಶಿಫಾರಸು ಪತ್ರ ಬರೆದಿದ್ದೇನೆ ಎಂದು ಹೇಳಿ, ಒಂದು ಪ್ರತಿಯನ್ನು ನನಗೂ ಕೊಟ್ಟಿದ್ದಾರೆ.

2023ರ ಜೂನ್‌ನಲ್ಲಿ ಶಾಸಕರೇ ಕರೆ ಮಾಡಿ, ಮನೆಗೆ ಕರೆದಿದ್ದರು. ಆದರೆ ನಾನು ಹೋಗಿರಲಿಲ್ಲ. 2023ರ ಆ. 14ರಂದು ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಶಾಸಕರ ಕಚೇರಿಗೆ ಸಭೆ ಬರುವಂತೆ ಸೂಚಿಸಿದ್ದರು. ಮೀಟಿಂಗ್‌ ಬಳಿಕ ಶಾಸಕರು, ನನ್ನನ್ನು ಪ್ರತ್ಯೇಕವಾಗಿ ಕರೆಸಿಕೊಂಡು, ಕಮಿಷನ್‌ ಕೇಳಿದರು. ಸದ್ಯ ಕಷ್ಟದಲ್ಲಿದ್ದೇನೆ. ಹಣವಿಲ್ಲ ಎಂದಾಗ, ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಗಂಗಾ ಎಂಟರ್‌ ಪ್ರೈಸಸ್‌ಗೆ ನೀಡಿರುವ ಗುತ್ತಿಗೆಯನ್ನು ಬದಲಾಯಿಸುವಂತೆ ಮುಖ್ಯ ಆಯುಕ್ತರಿಗೆ ಪತ್ರ ಬರೆಯುತ್ತೇನೆ ಎಂದು ಬೆದರಿಸಿದ್ದರು. ಆಗಲೂ ಕೆಟ್ಟ ಪದಗಳಿಂದ ನಿಂದಿಸಿದ್ದರು. ಅದರಿಂದ ಆತ್ಮಹತ್ಯೆಗೂ ಯೋಚಿಸಿದ್ದೆ ಎಂದು ಚಲುವರಾಜು ದೂರಿನಲ್ಲಿ ಆರೋಪಿಸಿದ್ದಾರೆ.

ಶಾಸಕರ ಆಪ್ತ ಸಹಾಯಕ ಅಭಿಷೇಕ್‌ ಮೂಲಕ ಕರೆ ಮಾಡಿ ಮತ್ತೂಮ್ಮೆ ಮನೆಗೆ ಕರೆಸಿಕೊಂಡಿದ್ದಾರೆ. ಆಗ 3 ವರ್ಷಗಳಿಂದ ನನ್ನ ವಾರ್ಡ್‌ಗಳಲ್ಲಿ ಕೆಲಸ ಮಾಡುತ್ತಿದ್ದೀಯಾ, ತಿಂಗಳಿಗೆ 1 ಲಕ್ಷ ರೂ.ನಂತೆ 36 ಲಕ್ಷ ರೂ. ಕೊಡಬೇಕಾಗುತ್ತದೆ. ಬದಲಿಗೆ 30 ಲಕ್ಷ ರೂ. ಕೊಟ್ಟು ಹೋಗು ಎಂದರು. ಅದಕ್ಕೆ ನಿರಾಕರಿಸಿ 15 ಲಕ್ಷ ರೂ. ಸಾಲ ಮಾಡಿ ಕೊಡುತ್ತೇನೆ ಎಂದು ಹೇಳಿದರೂ ನಿಂದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
2023ರ ಸೆಪ್ಟಂಬರ್‌ನಲ್ಲಿ ಕೆಲವು ದಿನಗಳ ಬಳಿಕ ಲಕ್ಷ್ಮೀದೇವಿನಗರದಲ್ಲಿ ಕೆಲಸ ಮಾಡುತ್ತಿರುವಾಗ ವಸಂತ್‌ಕುಮಾರ್‌ ಎಂಬಾತ ಕೂಡಲೇ ಶಾಸಕರನ್ನು ಭೇಟಿಯಾಗಬೇಕು. ಇಲ್ಲವಾದರೆ ಗ್ರಹಚಾರ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಿದ್ದ. ಅದರಿಂದ ಭಯಗೊಂಡು ಮರು ದಿನ ಮುನಿರತ್ನ ಅವರನ್ನು ಭೇಟಿಯಾಗಿದ್ದೆ. ಆಗ ಮತ್ತೂಮ್ಮೆ ಹಣ ಕೇಳಿದರು. ಸದ್ಯ ಇಲ್ಲ ಎಂದಾಗ ಶಾಸಕರು, ಮುಖಕ್ಕೆ ಹೊಡೆದಿದ್ದಾರೆ. ನಾನು ಶಾಸಕನಾಗಿ 5 ವರ್ಷ ಇರುತ್ತೇನೆ. ನಾನು ಹೇಳಿದಂತೆ ಕೇಳಿದರೆ ಮಾತ್ರ ಕ್ಷೇತ್ರದಲ್ಲಿ ಕೆಲಸ ಮಾಡಲು ಬಿಡುತ್ತೇನೆ. ಇಲ್ಲವಾದರೆ ಟೆಂಡರ್‌ ರದ್ದುಗೊಳಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಆಗ ಹಣ ಕೊಡಲು ಸಮಯ ಕೊಡಿ ಎಂದು ಕೇಳಿದರೂ ನನ್ನ ಟೆಂಡರ್‌ ರದ್ದುಗೊಳಿಸಿ ಕೂಡಲೇ ಅಲ್ಪಾವಧಿಗೆ ಟೆಂಡರ್‌ ಕರೆದು ಕಾರ್ಯಾದೇಶ ಮಾಡಲು ಬಿಬಿಎಂಪಿ ಆಯುಕ್ತರಿಗೆ ನನ್ನ ವಿರುದ್ಧ ಪತ್ರ ಬರೆದಿದ್ದಾರೆ. ವಾರ್ಡ್‌ನಲ್ಲೂ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ವಾರ್ಡ್‌ನ ಅಧಿಕಾರಿಗೆ ದೂರು ನೀಡಿದ್ದಾರೆ.

ಏನಿದು ಪ್ರಕರಣ?
ಗುತ್ತಿಗೆದಾರ ಚಲುವರಾಜು ಅವರು ಶಾಸಕ ಮುನಿರತ್ನ ವಿರುದ್ಧ ಲಂಚ ಬೇಡಿಕೆ, ಪ್ರಾಣ ಬೆದರಿಕೆ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಆರೋಪಿಸಿದ್ದರು. ಬಳಿಕ ನಗರ ಪೊಲೀಸ್‌ ಆಯುಕ್ತ ರನ್ನು ಭೇಟಿಯಾಗಿ ರಕ್ಷಣೆ ಕೋರಿದ್ದರು. ಇದರ ಬೆನ್ನಲ್ಲೇ ಚಲುವರಾಜು ಅವರಿಂದ ದೂರು ಸ್ವೀಕರಿಸಿದ ವೈಯಾಲಿಕಾವಲ್‌ ಠಾಣೆ ಪೊಲೀಸರು ಶಾಸಕ ಮುನಿರತ್ನ, ಅವರ ಗನ್‌ ಮ್ಯಾನ್‌ ವಿಜಯಕುಮಾರ್‌, ಶಾಸಕರ ಕಾರ್ಯದರ್ಶಿ ಅಭಿಷೇಕ್‌ ಹಾಗೂ ವಸಂತ್‌ ಕುಮಾರ್‌ ವಿರುದ್ಧ ಎಫ್ಐಆರ್‌ ದಾಖಲಿಸಿದ್ದರು. ಅಲ್ಲದೆ ತನಗೆ ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಜಾತಿ ನಿಂದನೆ ಮಾಡಿರುವ ಸಂಬಂಧ ಪಾಲಿಕೆ ಮಾಜಿ ಸದಸ್ಯ ವೇಲು ನಾಯಕರ್‌ ಕೂಡ ಚಲುವರಾಜು ಮೂಲಕ ದೂರು ನೀಡಿದ್ದು, ಈ ಸಂಬಂಧವೂ ಮತ್ತೂಂದು ಎಫ್ಐಆರ್‌ ದಾಖಲಾಗಿದೆ.

ಆರೋಪಕ್ಕೆ ಶಿಕ್ಷೆ ಏನು?
* 506 ಉದ್ದೇಶಪೂರ್ವಕ ಬೆದರಿಕೆ (7 ವರ್ಷಗಳ ವರೆಗೆ ಜೈಲು, ದಂಡ)
* 504ಉದ್ದೇಶಪೂರ್ವಕ
* ಶಾಂತಿ ಭಂಗ, ಅವಮಾನ (2 ವರ್ಷ ಶಿಕ್ಷೆ, ದಂಡ)
* 385ಸುಲಿಗೆ ಉದ್ದೇಶದಿಂದ ಭಯಪಡಿಸುವುದು (2 ವರ್ಷಗಳವರೆಗೆ ಶಿಕ್ಷೆ, ದಂಡ)
* 420ವಂಚನೆ (7 ವರ್ಷವರೆಗಿನ ಶಿಕ್ಷೆ, ದಂಡ)
* 323ಉದ್ದೇಶಪೂರ್ವಕ ಹಲ್ಲೆ (1 ವರ್ಷ ಶಿಕ್ಷೆ, ದಂಡ)
* 509ಮಹಿಳೆಯ ಮಾನಕ್ಕೆ ಕುಂದುಂಟು ಮಾಡುವ ರೀತಿ ನಿಂದನೆ (3 ವರ್ಷಗಳವರೆಗಿನ ಶಿಕ್ಷೆ, ದಂಡ)
* 153ಗುಂಪು ಘರ್ಷಣೆಗೆ ಪ್ರಚೋದನೆ (2 ವರ್ಷ ಗಳವರೆಗೆ ಶಿಕ್ಷೆ, ದಂಡ)
* ಜಾತಿ ನಿಂದನೆ- ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆ (6 ತಿಂಗಳಿಂದ 5 ವರ್ಷಗಳವರೆಗೆ ಜೈಲು, ದಂಡ)
ಸ್ಪಷ್ಟೀಕರಣ ಕೇಳಿ ಬಿಜೆಪಿ ನೋಟಿಸ್‌
* ಪ್ರಕರಣ ಸಂಬಂಧ ಶಾಸಕ ಮುನಿರತ್ನ ಅವರಿಗೆ ಬಿಜೆಪಿ ಶಿಸ್ತು ಸಮಿತಿ ನೋಟಿಸ್‌ ಜಾರಿ ಮಾಡಿದೆ. 5 ದಿನಗಳೊಳಗೆ ಸ್ಪಷ್ಟೀಕರಣ ನೀಡುವಂತೆ ಸೂಚಿಸಿದೆ.

ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ರೇಡ್:‌ ವಿಲ್ಸನ್​ ಗಾರ್ಡನ್ ನಾಗ ಸೇರಿ ಸುಮಾರು 18 ಮೊಬೈಲ್‌ ಸೀಜ್!

Leave a Reply

Your email address will not be published. Required fields are marked *