ಬೆಂಗಳೂರು: ಮುಂದಿನ ಆರರಿಂದ ಎಂಟು ತಿಂಗಳಲ್ಲಿ ಎಲ್ಲಾ ಸೇವೆಗಳಿಗೂ ಯುಪಿಐ ಆನ್ಲೈನ್ ಪಾವತಿ ವ್ಯವಸ್ಥೆ ಮಾಡಲಾಗುವುದು ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಕರ್ನಾಟಕ ಹೈಕೋರ್ಟ್ಗೆ ಭರವಸೆ ನೀಡಿದೆ.
ದೇಶದಲ್ಲಿಎಲ್ಲ ರೀತಿಯ ವ್ಯವಹಾರಗಳೂ ಆನ್ಲೈನ್ ಮೂಲಕ ನಡೆಯುತ್ತಿದ್ದರೂ ಯುಪಿಐ ವ್ಯವಸ್ಥೆಯಲ್ಲಿ ಹಣ ಸ್ವೀಕರಿಸುವ ಯೋಜನೆ ಕುರಿತಂತೆ ನಿರ್ಲಕ್ಷ್ಯ ವಹಿಸಿದ್ದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ ಹೈಕೋರ್ಟ್ ಚಾಟಿ ಬೀಸಿದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ.
ಕರ್ನಾಟಕ ಹೈಕೋರ್ಟ್ ಸೂಚನೆ ಮೇರೆಗೆ ಪ್ರಮಾಣಪತ್ರ ಸಲ್ಲಿಸಿರುವ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ, “ಆನ್ಲೈನ್ಗಳಲ್ಲಿ ಶುಲ್ಕ ಸ್ವೀಕರಿಸಲು ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಅಭಿವೃದ್ಧಿ ಮಾಡಬೇಕಾಗಿದ್ದು, ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆ ನವೀಕರಿಸಲಾಗಿದೆ. ಆದ್ದರಿಂದ ಮುಂಬರುವ 8 ತಿಂಗಳಲ್ಲಿ ಎಲ್ಲಾ ಸೇವೆಗಳನ್ನೂ ಯುಪಿಐ ವ್ಯಾಪ್ತಿಗೆ ಒಳಪಡಿಸಲಾಗುವುದು. ಟೆಂಡರ್ ಪ್ರಕ್ರಿಯೆ ಮೂಲಕ ಮಾಹಿತಿ ತಂತ್ರಜ್ಞಾನ (ಐಟಿ) ಕೌಂಟರ್ಗಳಲ್ಲಿ ಸ್ಕ್ಯಾನರ್ಗಳನ್ನು ಅಳವಡಿಸಬೇಕಿದೆ. ಅದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ,” ಎಂದರು.
ಯುಪಿಐ ಪಾವತಿ ನಿರಾಕರಿಸಿದ್ದ ಬೆಸ್ಕಾಂನ ಕ್ರಮ ಪ್ರಶ್ನಿಸಿ ಹೊಸಕೋಟೆಯ ಸೀತಾಲಕ್ಷ್ಮಿ ಎಂಬುವವರು ಸಲ್ಲಿಸಿದ್ದ ಅರ್ಜಿ, ನ್ಯಾಯಮೂರ್ತಿ ಎನ್ಎಸ್ ಸಂಜಯ್ಗೌಡ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತು. ಆಗ ಬೆಸ್ಕಾಂ ಎಂಡಿ ಸಲ್ಲಿಸಿರುವ ಪ್ರಮಾಣಪತ್ರ ಪರಿಶೀಲಿಸಿದ ನ್ಯಾಯಮೂರ್ತಿ, “ಇತ್ತೀಚಿನ ದಿನಗಳಲ್ಲಿ ಎಲ್ಲರೂ ಯುಪಿಐ ವ್ಯವಸ್ಥೆ ಬಳಕೆ ಮಾಡುತ್ತಿದ್ದಾರೆ. ಆದರೆ ಪ್ರಮಾಣಪತ್ರದ ವಿವರ ಗಮನಿಸಿದರೆ ಈ ಯೋಜನೆ ಜಾರಿಗೆ ದೀರ್ಘ ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ, ತಾತ್ಕಾಲಿಕವಾಗಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲವೇ?” ಎಂದು ಪ್ರಶ್ನಿಸಿದರು.
”ದೇಶಾದ್ಯಂತ ದಿನಸಿ ವ್ಯಾಪಾರಿಯೂ ಅಂಗಡಿ ಮುಂದೆ ಸ್ಕ್ಯಾನರ್ ಹೊಂದಿರುತ್ತಾನೆ. ನೀವು ಕರೆನ್ಸಿ ನೋಟುಗಳನ್ನು ಸಂಗ್ರಹಿಸುತ್ತಿದ್ದೀರಿ. ಈ ಡಿಜಿಟಲ್ ಯುಗದಲ್ಲಿ ಇದು ಸರಿಯೇ? ಡಿಜಿಟಲ್ ಸೇವೆಗಳನ್ನು ಜಾರಿ ಮಾಡಬೇಕು ಎಂದು ಸರಕಾರ ಸೂಚಿಸುತ್ತಿದೆ. ಹೀಗಿದ್ದರೂ, ನಗದು ಹಣ ಸ್ವೀಕರಿಸಲು ಇಚ್ಛಿಸಲಾಗುತ್ತಿದೆ,” ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು. “ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ನ್ಯಾಯಾಲಯಕ್ಕೆ ವಿಳಂಬವಾಗಿತ್ತು. ಆದರೆ, ನೀವು ನಮಗಿಂತಲೂ ನಿಧಾನವಾಗಿದ್ದೀರಿ,” ಎಂದು ನ್ಯಾಯಪೀಠ ಹೇಳಿತು.
ಅರ್ಜಿದಾರರ ಪರ ವಕೀಲ ಶ್ರೀಧರ್ ಪ್ರಭು, ಬೆಸ್ಕಾಂ ಸಲ್ಲಿಸಿದ ಆಕ್ಷೇಪಣೆಗಳಿಗೆ ಉತ್ತರಿಸಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಆಗಸ್ಟ್ 30ಕ್ಕೆ ಮುಂದೂಡಿತು.
ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ ಮೆಟ್ಟಿಲೇರಿದ ಬೊಮ್ಮಾಯಿ! ಚರ್ಚೆಗೀಡಾದ ಮಾಜಿ ಸಿಎಂ ನಡೆ


