BBMP
Loading ...

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ನಿನ್ನೆ ಸುರಿದ ಮಳೆಗೆ ಗೋವಿಂದರಾಜನಗದಲ್ಲಿ ಬೃಹತ್ ಮರವೊಂದು ಆಟೋ ಮೇಲೆ ಬಿದ್ದಿದೆ. ಪರಿಣಾಮ ಆಟೋ ಸಂಪೂರ್ಣ ಜಖಂಗೊಂಡಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆಟೋ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ. ಮೃತ ಚಾಲಕನನ್ನು ಶಿವರುದ್ರಯ್ಯ ಎಂದು ಗುರುತಿಸಲಾಗಿದೆ.

ಮರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಬಿಗ್ ಶಾಕ್ ಎದುರಾಗಿದೆ. ಘಟನೆ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಮೃತ ಶಿವರುದ್ರಯ್ಯ ಅವರು ಹಬ್ಬದ ನಡುವೆಯೂ ಆಟೋ ನಡೆಸಲು ಬಂದಿದ್ದರು. ಈ ವೇಳೆ ವಿಜಯನಗರದ ಎಂ.ಸಿ ಲೇಔಟ್ ನಲ್ಲಿ ಚಲಿಸುತ್ತಿದ್ದ ಆಟೋ ಮೇಲೆ ಏಕಾಏಕಿ ಮರ ಉರುಳಿ ಬಿದ್ದಿದೆ. ದುರಂತದಲ್ಲಿ ಆಟೋ ಚಾಲಕನ ತಲೆ ಮತ್ತು ಎದೆ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಆಟೋ ಚಾಲಕನ ಸಾವಿನ ಬೆನ್ನಲ್ಲೇ ಗೋವಿಂದರಾಜನಗರ ಕಾಂಗ್ರೆಸ್​ ಶಾಸಕ ಪ್ರಿಯಕೃಷ್ಣ ಸಂತಾಪ ಸೂಚಿಸಿದ್ದು, ಅವರ ಒತ್ತಾಯದ ಮೇರೆಗೆ ಬಿಬಿಎಂಪಿ, ಶಿವರುದ್ರಯ್ಯ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಜೊತೆಗೆ ಸಂಪೂರ್ಣ ಆಸ್ಪತ್ರೆ ಖರ್ಚು ವೆಚ್ಚ ಭರಿಸುವ ಆಶ್ವಾಸನೆಯನ್ನು ಪಾಲಿಕೆ ನೀಡಿದೆ. ಅಂದಹಾಗೇ ಮೃತ ಶಿವರುದ್ರಯ್ಯ ಮೂಲತಃ ತುಮಕೂರು ಜಿಲ್ಲೆಯವರು, ಸದ್ಯ ಮೃತದೇಹದ ಅಂತ್ಯಸಂಸ್ಕಾರವನ್ನು ತುಮಕೂರಲ್ಲಿ ನಡೆಸಲು ಕುಟುಂಬಸ್ಥರು ಮುಂದಾಗಿದ್ದಾರೆ.

ಇಂದಿನಿಂದ ಎರಡು ದಿನ ಕುಂದಾಪ್ರ ಕನ್ನಡ ಹಬ್ಬ: ಬೆಂಗಳೂರಿನ ಅರಮನೆ ಮೈದಾನ ಸಜ್ಜು, ಇಲ್ಲಿದೆ ಕಾರ್ಯಕ್ರಮಗಳ ಸಂಪೂರ್ಣ ವಿವರ

Leave a Reply

Your email address will not be published. Required fields are marked *