Greater Bengaluru News9 : ಆದಾಯಕ್ಕೂ ಮೀರಿದ ಆಸ್ತಿ ಸಂಪಾದನೆ ಮಾಡಿರೋದು ಪ್ರಕರಣದಲ್ಲಿ ಕರ್ನಾಟಕ ಕೌನ್ಸಿಲ್ ಫಾರ್ ಟೆಕ್ನಿಕಲ್ ವ್ಯವಸ್ಥಾಪಕ ನಿರ್ದೇಶಕ ವಿ. ಮುನಿಯಪ್ಪ ದೋಷಿ ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಆ ಕುರಿತ ವರದಿ ಇಲ್ಲಿದೆ.
ಕರ್ನಾಟಕ ಕೌನ್ಸಿಲ್ ಫಾರ್ ಟೆಕ್ನಿಕಲ್ ವ್ಯವಸ್ಥಾಪಕ ನಿರ್ದೇಶಕ ವಿ. ಮುನಿಯಪ್ಪ ಅವರು 2014 ರಲ್ಲಿ ಬೆಂಗಳೂರು ಬಸವ ಭವನದಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಆ ವೇಳೆ ತಮ್ಮ ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ನಿಬಂಧನೆಗಳ ಅಡಿಯಲ್ಲಿ ಲೋಕಾಯುಕ್ತರು ಭ್ರಷ್ಟಚಾರ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಸಂಬಂಧ ಇಂದು ತೀರ್ಪು ಪ್ರಕಟಿಸಿರುವ ಕರ್ನಾಟಕ ಲೋಕಾಯುಕ್ತ ನ್ಯಾಯಾಲಯವು ಮುನಿಯಪ್ಪಗೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 4.5 ಕೋಟಿ ದಂಡ ವಿಧಿಸಿ ಆದೇಶಿಸಿದೆ. ಏತನ್ಮಧ್ಯೆ, 4.5 ಕೋಟಿ ದಂಡ ಕಟ್ಟದಿದ್ದರೆ 6 ತಿಂಗಳ ಹೆಚ್ಚುವರಿ ಶಿಕ್ಷೆಯನ್ನ ಕೋರ್ಟ್ ವಿಧಿಸಿದೆ.
ಮುನಿಯಪ್ಪ ಮೇಲಿನ ಆರೋಪವೇನು?
2014 ರಲ್ಲಿ ಕರ್ನಾಟಕ ಲೋಕಾಯುಕ್ತರು ಭ್ರಷ್ಟಾಚಾರ ತಡೆ ಕಾಯ್ದೆ 1988 ರ ಅಡಿಯಲ್ಲಿ ಈ ಪ್ರಕರಣವನ್ನು ದಾಖಲಿಸಿದ್ದರು. ಈ ತನಿಖೆಯ ವೇಳೆ ಮುನಿಯಪ್ಪ ಅವರು ತಮ್ಮ ಆದಾಯಕ್ಕಿಂತಲೂ ₹3.31 ಕೋಟಿ ಅಧಿಕ ಆಸ್ತಿಯನ್ನು ಹೊಂದಿರುವುದು ಪತ್ತೆಯಾಗಿತ್ತು. ಅಂದರೆ, ಇದು ಅವರ ಕಾನೂನುಬದ್ಧ ಆದಾಯಕ್ಕಿಂತ ಸುಮಾರು 77.78% ರಷ್ಟು ಹೆಚ್ಚಾಗಿದೆ.
ಕರ್ನಾಟಕ ಲೋಕಾಯುಕ್ತವು ಸರ್ಕಾರದ ಅಧಿಕಾರಿಗಳು ಹಾಗೂ ಸಾರ್ವಜನಿಕ ಸೇವಕರ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ತನಿಖೆ ಮಾಡುವ ಸ್ವತಂತ್ರ ಸಂಸ್ಥೆಯಾಗಿದ್ದು, ಜನರಿಗೆ ನ್ಯಾಯ ಒದಗಿಸುವ ಪ್ರಮುಖ ವ್ಯವಸ್ಥೆಯಾಗಿದೆ. ಇದು ಅಧಿಕಾರದ ದುರುಪಯೋಗ, ಲಂಚಕೋರಿಕೆ ಮತ್ತು ಅನ್ಯಾಯದ ವಿರುದ್ಧ ಹೋರಾಡಲು ಸ್ಥಾಪಿಸಲಾಗಿದೆ.


