Greater Bengaluru News9:- ನಗರದಲ್ಲಿ ನಡೆದ 7.11 ಕೋಟಿ ರೂ. ಎಟಿಎಮ್ ದರೋಡೆ ಪ್ರಕರಣವನ್ನು ಕೇವಲ 60 ಗಂಟೆಗಳೊಳಗೆ ಪತ್ತೆ ಹಚ್ಚಿದ ನಗರ ಪೊಲೀಸರು, ಪೊಲೀಸ್ ಕಾನ್ಸ್ಟೇಬಲ್ ಅಣ್ಣಪ್ಪ ನಾಯಕ್ ಸೇರಿದಂತೆ ಮೂವರನ್ನು ಬಂಧಿಸಿ 5.76 ಕೋಟಿ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ನವೆಂಬರ್ 19ರಂದು ಮಧ್ಯಾಹ್ನ 1:20ಕ್ಕೆ ಡಿಜೆ ಹಳ್ಳಿ ಬಳಿ ಆರ್ಬಿಐ ಅಧಿಕಾರಿಗಳಂತೆ ನಟಿಸಿದ ಆರೋಪಿಗಳು, ಪಿಸ್ತೂಲ್ ತೋರಿಸಿ ವಾನ್ ಅಪಹರಿಸಿ ಅಶೋಕ ಪಿಲ್ಲರ್–ಜಯನಗರ–ಡೈರಿ ಸರ್ಕಲ್ ಪ್ರದೇಶದಲ್ಲಿ ಹಣ ದೋಚಿದ್ದರು. ಇದು ಪೂರ್ವಯೋಜಿತ ದರೋಡೆ ಆಗಿದ್ದು, ಸಿಸಿಟಿವಿ ಕಾಣದ ಸ್ಥಳಗಳಲ್ಲಿ ನಿಲುಗಡೆ, ಹಲವು ವಾಹನಗಳ ಉಪಯೋಗ, ನಂಬರ್ ಪ್ಲೇಟ್ ಬದಲಾವಣೆ, ವಿವಿಧ ಭಾಷೆಗಳಲ್ಲಿ ಸಂವಹನ ಸೇರಿದಂತೆ ತನಿಖೆ ತಪ್ಪಿಸುವ ಹಲವಾರು ಕ್ರಮಗಳನ್ನು ಆರೋಪಿಗಳು ಕೈಗೊಂಡಿದ್ದರು. ಪ್ರಾಥಮಿಕ ಸುಳಿವುಗಳು ಅತಿ ಕಡಿಮೆ ಇದ್ದರೂ, ತಾಂತ್ರಿಕ ವಿಶ್ಲೇಷಣೆ, ಗುಪ್ತಚರ ಮಾಹಿತಿ ಮತ್ತು ವಿಭಿನ್ನ ರಾಜ್ಯಗಳಲ್ಲಿ—ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಮತ್ತು ತೆಲಂಗಾಣ—ವ್ಯಾಪಕ ಶೋಧದಿಂದ ಪೊಲೀಸರು ಕೃತ್ಯ ನಡೆದ 24 ಗಂಟೆಗಳಲ್ಲೇ ಮುಖ್ಯ ಸುಳಿವುಗಳನ್ನು ಪತ್ತೆಹಚ್ಚಿ, 54 ಗಂಟೆಗಳಲ್ಲಿ ಮೂವರನ್ನು ಬಂಧಿಸಿದರು.
ದರೋಡೆಯಲ್ಲಿ 6–8 ಮಂದಿ ಭಾಗಿಯಾಗಿದ್ದಾರೆಂದು ಶಂಕಿಸಲಾಗಿದ್ದು, ಮಾಸ್ಟರ್ಮೈಂಡ್ ಪೊಲೀಸ್ ಕಾನ್ಸ್ಟೇಬಲ್ ಅಣ್ಣಪ್ಪ, ಜೊತೆಗೆ ಸಿಎಂಎಸ್ ಮಾಜಿ ನೌಕರ ಜೇವಿಯರ್ ಹಾಗೂ ನೌಕರ ಗೋಪಿಯ ಹೆಸರನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಠಾಣೆಗಳ ಇನ್ಸ್ಪೆಕ್ಟರ್ಗಳು, ಎಸಿಪಿಗಳು ಹಾಗೂ ಸಿಸಿಬಿ ತಂಡಗಳು ಸಂಯೋಜಿತ ಕಾರ್ಯಾಚರಣೆ ನಡೆಸಿದ್ದು, ಪತ್ರಿಕಾಗೋಷ್ಠಿಯಲ್ಲಿ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ, ಅಜಯ್ ಹಿಲೋರಿ, ಡಿಸಿಪಿ ಗಿರೀಶ್ ಲೋಕೇಶ್ ಮತ್ತು ಎಸಿಪಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.


